ವಿದ್ಯಾರ್ಥಿ ಜೀವನದಲ್ಲಿ ರಂಗಭೂಮಿ ಬೆಳಕಾಗಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೇವಲ ಶುಷ್ಕವಾದ ಬೋಧನೆಯಾಗದೇ ಕಲಿಕೆಯಲ್ಲಿ ಗುಣಾತ್ಮಕತೆಯನ್ನು ನಾಟಕಗಳು ಒದಗಿಸುತ್ತವೆ. ಒಂದು ಪಾಠವನ್ನು ನಾಟಕಕ್ಕೆ ಅಳವಡಿಸಿ ರಂಗಕ್ಕೆ ತಂದಾಗ ವಿಷಯ ಹೆಚ್ಚು ಮನದಟ್ಟಾಗುತ್ತದೆ. ಮಕ್ಕಳು ತಾವು ಅಭಿನಯಿಸಿದ ಪಾತ್ರವನ್ನು ಜೀವನದುದ್ದಕ್ಕೂ ನೆನಪಿಡುತ್ತಾರೆ. ರಂಗಭೂಮಿ ಮಕ್ಕಳ ಬಾಳು ಬೆಳಗುತ್ತಿದೆ ಎಂದು ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೊಟಿ ಅಭಿಪ್ರಾಯಪಟ್ಟರು.

Advertisement

ಧಾರವಾಡದ ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವು ಧಾರವಾಡ ರಂಗಾಯಣದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 30ನೇ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಬಾಲ್ಯದಲ್ಲಿಯೇ ನಾಟಕ ಕಲೆ ಕರಗತ ಮಾಡಿಸಬೇಕು. ಮಕ್ಕಳಿಗೆ ಕಲೆ, ಸಂಗೀತ, ಸಾಹಿತ್ಯದ ಅರಿವು ಅವಶ್ಯಕ. ಇದು ಅವರ ಸರ್ವಾಂಗೀಣ ವ್ಯಕ್ತಿತ್ವ ಅರಳಲು ಸಾಧ್ಯವಾಗುವದು. ಪ್ರತಿಷ್ಠಾನವು ನಾಟಕೋತ್ಸವನ್ನು ನರ‍್ಕಾಲ ಮುಂದುವರೆಸಿಕೊಂಡು ಬರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮೂವತ್ತು ವರ್ಷದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ ಪಯಣ ಒಂದು ದಾಖಲೆಯೇ ಸರಿ. ಇದು ನಿರಂತರವಾಗಿ ಮುಂದುವರೆಯಲು ಯುವ ಶಿಕ್ಷಕರು ತೊಡಗಿಸಿಕೊಳ್ಳಬೇಕು. ಆ ದಿಶೆಯಲ್ಲಿ ರಂಗಾಯಣ ಯುವ ಶಿಕ್ಷಕರಿಗೆ ಒಂದು ತರಬೇತಿ ಯೋಜನೆಯನ್ನು ರೂಪಿಸಿ ಶೀಬಿರಗಳನ್ನು ಆಯೋಜಿಸಲಿ ಎಂದು ಸಲಹೆ ನೀಡಿದರು.

ನಾಟಕೋತ್ಸವದ ಸಂಯೋಜಕರಾದ ಕೆ.ಎಚ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಸುದೀರ್ಘ ಕಾಲ ಈ ನಾಟಕೋತ್ಸವ ನಡೆಸಲು ಸಹಕರಿಸಿದ ಶಿಕ್ಷಕ ಸಮೂಹಕ್ಕೆ ಅಭಿನಂದಿಸಿದರು. ಶಿಕ್ಷಣ ಚಿಂತಕರಾದ ಎಮ್.ಎಮ್. ಚಿಕ್ಕಮಠ ಸ್ವಾಗತಿಸಿದರು. ಹಿರಿಯರಾದ ನಿಂಗಣ್ಣ ಕುಂಟಿ, ಎಸ್.ಎಂ. ದಾನಪ್ಪಗೌಡರ, ಬಿ.ಜಿ. ಬಾರಕಿ, ಡಾ. ಕುಮುದ್ವತಿ ಭರಮಗೌಡರ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕ, ಸಾಹಿತಿ ಡಾ. ಲಿಂಗರಾಜ ರಾಮಾಪೂರ ಕಾರ್ಯಕ್ರಮ ನಿರ್ವಹಿಸಿದರು. ಪ್ರಮಿಳಾ ಜಕ್ಕಣ್ಣವರ ವಂದಿಸಿದರು. ಉದ್ಘಾಟನೆಯ ನಂತರ ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಿಂದ 12 ನಾಟಕಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಬಿ. ಕೊಡ್ಲಿ ಮಾತನಾಡಿ, ದತ್ತಿದಾನಿಗಳು ನೆರವಿನಿಂದ ನಾಟಕೋತ್ಸವ ನಿರಂತರವಾಗಿ ನಡೆದುಕೊಂಡು ಬಂದಿದೆ. ಎಲ್ಲ ನಾಟಕ ತಂಡಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಮುಂದಿನ ವರ್ಷದಿಂದ ಪ್ರೋತ್ಸಾಹಧನ ಹೆಚ್ಚಿಸುವ ಯೋಜನೆ ಹೊಂದಿದ್ದೇವೆ. ದತ್ತಿದಾನಿಗಳು ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ಈ ಯೋಜನೆಗೆ ಕೈಜೋಡಿಸಿಬೇಕು ಎಂದರು.


Spread the love

LEAVE A REPLY

Please enter your comment!
Please enter your name here