ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಪೊಮ್ಮಸಂದ್ರ ಗ್ರಾಮದಲ್ಲಿ ಒಂದೇ ದಿನ ಎರಡು ದೇವಾಲಯಗಳಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
ಚಂದ್ರಮೌಳೇಶ್ವರ ದೇವಾಲಯ ಹಾಗೂ ಓಶಕ್ತಿ ದೇವಾಲಯಗಳನ್ನು ಗುರಿಯಾಗಿಸಿಕೊಂಡ ಕಳ್ಳರು, ಆರೆಕೋಲು ಬಳಸಿ ಬಾಗಿಲುಗಳನ್ನು ಮೀಟಿ ಒಳನುಗ್ಗಿದ್ದಾರೆ. ಕಳ್ಳರು ಎರಡೂ ದೇವಾಲಯಗಳಲ್ಲಿದ್ದ ಹುಂಡಿಗಳನ್ನು ಒಡೆದು ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಶಂಕೆ ವ್ಯಕ್ತವಾಗಿದೆ.
ಜೊತೆಗೆ ಓಶಕ್ತಿ ದೇವಾಲಯದಿಂದ ಎರಡು ಮಾಂಗಲ್ಯ ಸರಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಓಶಕ್ತಿ ದೇವಾಲಯದಲ್ಲಿ ಇದು ಎರಡನೇ ಬಾರಿ ಕಳ್ಳತನವಾಗಿದ್ದು, ಕಳೆದ ಬಾರಿ ಸುಮಾರು ₹2 ಲಕ್ಷ ಮೌಲ್ಯದ ಪಂಚಲೋಹ ವಿಗ್ರಹವನ್ನು ಕಳ್ಳರು ಅಪಹರಿಸಿದ್ದ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಹಸಿಯಾಗಿ ಉಳಿದಿದೆ. ಪದೇಪದೇ ನಡೆಯುತ್ತಿರುವ ಇಂತಹ ಘಟನೆಗಳು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.
ಈ ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.
ಪೊಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ದೇವಾಲಯಗಳ ಭದ್ರತೆ ಹೆಚ್ಚಿಸಬೇಕೆಂಬ ಒತ್ತಾಯ ಇದೀಗ ಮತ್ತಷ್ಟು ಜೋರಾಗಿದೆ.



