ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣದ ವಿದ್ಯಾನಗರದಲ್ಲಿ ನ. 28ರಂದು ಪಾರವ್ವ ಹಳ್ಳಿಕೇರಿ ಅವರ ಮನೆಯ ಕೀಲಿ ತೆಗೆದು ಮನೆಯ ಟ್ರೆಸರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರ ಬಗ್ಗೆ ನ. 30ರಂದು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ರೋಹನ್ ಜಗದೀಶ್, ಡಿಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ಈರಪ್ಪ ರಿತ್ತಿ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿ ಆರೋಪಿತರ ಪತ್ತೆ ಕಾರ್ಯ ಕೈಗೊಂಡಿದ್ದು, ಡಿ. 1ರ ಬೆಳಿಗ್ಗೆ 8.30 ಗಂಟೆಗೆ ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪಿತನನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದೆ ಇದ್ದಾಗ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ, ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.
ಕಳ್ಳತನ ಮಾಡಿದ ಎಲ್ಲಾ ಬಂಗಾರದ ಆಭರಣಗಳನ್ನು 24 ಗಂಟೆಗಳಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಕಳ್ಳತನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಶಿರಹಟ್ಟಿ ಪೊಲೀಸ್ ಠಾಣೆಯ ಈರಪ್ಪ ರಿತ್ತಿ, ಶೇಖರ ಕಡಬಿನ, ಸಿಬ್ಬಂದಿ ಎಂ.ಎ. ಸದರನ್ನವರ, ಹನಮಂತ ದೊಡ್ಡಮನಿ, ಬಸವರಾಜ ಮುಳಗುಂದ, ಠಾಕೂರ ಕಾರಭಾರಿ, ಚರಂತ ಗುಂಡೂರಮಠ, ರಾಜೇಶ ವೀರಾಪೂರ ಇವರುಗಳ ಉತ್ತಮ ಕಾರ್ಯಕ್ಕೆ ಎಸ್ಪಿ ರೋಹನ್ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.


