ಕಲಬುರಗಿ: 2 ವರ್ಷವಾದ್ರೂ ಅಭಿವೃದ್ಧಿಯಾಗಿಲ್ಲ, ದಲಿತರನ್ನು ಭಿಕ್ಷುಕರನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ರಾಮಯ್ಯ ಹಾಗೂ ಡಿಕೆಶಿ ಬರಿ ಭಾಷಣ ಮಾಡ್ತಾರೆ. ಆದ್ರೆ ಎಲ್ಲಾ ದರ ಹೆಚ್ಚಾಗಿ ಜನರು ಪರದಾಡುತ್ತಿದ್ದಾರೆ. ಸರಕಾರ ಬಂದು 2 ವರ್ಷವಾದ್ರೂ ಅಭಿವೃದ್ಧಿಯಾಗಿಲ್ಲ, ಸರಿಯಾಗಿ ಹಣ ಬಿಡುಗಡೆ ಮಾಡದೆ ದಲಿತರನ್ನು ಭಿಕ್ಷುಕರನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಅವರು ಹೇಳಿದ್ದಾರೆ.
ಸಿಎಂ ಸಿದ್ರಾಮಯ್ಯ ಅಧಿಕಾರಕ್ಕೆ ಬಂದಾಗ SC ST ಉದ್ದಾರ ಮಾಡ್ತಿನಿ ಅಂದಿದ್ರು. ಆದ್ರೆ ನುಡಿದಂತೆ ನಡೆದಿಲ್ಲ ಸಿಎಂ ಸಿದ್ರಾಮಯ್ಯ ಅವರು, ಬರಿ SC ST ಜನರ ಓಟ್ ಪಡೆಯಲು ಈ ರೀತಿ ಹುನ್ನಾರ ನಡೆಯುತ್ತಿದೆ. ಹೀಗಾಗಿ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತಿವಿ ಎಂದು ಗೋವಿಂದ ಕಾರಜೋಳ ಸಿಡಿದಿದ್ದಾರೆ.
ಅದಲ್ಲದೆ 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 50 ಜನ ಹೆಣ್ಣು ಮಕ್ಕಳ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. 1100 ನವಜಾತ ಶಿಶುಗಳು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 12 ಜನ ಕಾಂಟ್ರ್ಯಾಕ್ಟರ್ ಗಳು ಬಿಲ್ ಮಾಡಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರಕಾರದಿಂದ ನೀರಾವರಿಗೆ ಯಾವುದೇ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ಬ್ಯೂಸಿಯಾಗಿದೆ. ನಾನು ಮುಖ್ಯಮಂತ್ರಿ ಆಗಬೇಕು ಅಂತಾ ದಲಿತರು, ಹಿಂದುಳಿದವರು ಹೇಳ್ತಾರೆ. ನಾನು ಮುಖ್ಯಮಂತ್ರಿ ಆಗಬೇಕು ಅಂತಾ ಲಿಂಗಾಯಿತರು ಶಾಮನೂರು ಶಿವಶಂಕರಪ್ಪ ಹೇಳ್ತಾರೆ. ಇದೇ ರೀತಿ ಹೊಡೆದಾಡಿಕೊಂಡರೆ ಕಾಂಗ್ರೆಸ್ ನಲ್ಲಿ ಎರಡ್ಮೂರು ತಿಂಗಳಿಗೆ ಸರ್ಕಾರ ಹೋಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಮ್ಮ ವೈಫಲ್ಯ ಕೂಡ ಇದೆ, ಸರ್ಕಾರದ ವೈಫಲ್ಯ ಕಡೆ ನಮ್ಮ ನಡೆ ಇರಬೇಕಾಗಿತ್ತು.
ಆದ್ರೆ ನಮ್ಮ ನಮ್ಮಲ್ಲೆ ಚೂರಿ ಚೂಚ್ಚಿಕೊಂಡು ಹೊಡೆದಾಡ್ತಿದ್ದೇವೆ. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ ಆದ್ದರಿಂದ ನಮ್ಮಲ್ಲಿರುವ ಸಮಸ್ಯೆ ಬಗೆ ಹರಿಸುತ್ತೆ. ಏಕಾನಾಥ್ ಶಿಂಧೆ , ಅಜಿತ್ ಪವಾರ್ ಯಾರ ಬರ್ತಾರೋ ಬಿಡ್ತಾರೋ ಗೊತ್ತಿಲ್ಲ, ನಮ್ಮ ಪಕ್ಷ ದೇಶದ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿದ್ದು, ಎಣ್ಣೆ ಬಂದಾಗ ನಾವು ಕಣ್ಣು ಮುಚ್ಚಿಕೊಂಡು ಕೂರೋದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.