ಸನಾತನ ಧರ್ಮದ ವಿರುದ್ಧ ಕುತಂತ್ರ ನಡೆಯುತ್ತಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ 200 ದೇಶಗಳ ಪೈಕಿ ಭಾರತ ಮತ್ತು ನೇಪಾಳದಲ್ಲಿ ಮಾತ್ರ ಹಿಂದೂಗಳಿಗೆ ನೆಲೆಯಿದೆ. 198 ದೇಶಗಳಲ್ಲಿ ಹಿಂದೂಗಳ ಸಂಖ್ಯೆ ಬಹುತೇಕ ಕಡಿಮೆ ಇದೆ. ಇತಿಹಾಸ ಪುಟ ತೆರೆದರೆ ಜಗತ್ತಿನ ನಾನಾ ದೇಶಗಳ ಜನಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಜಗತ್ತಿನಲ್ಲಿ ಶೇ.2.4ರಷ್ಟು ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚುತ್ತಿದೆ. ಆದರೆ, ಹಿಂದೂಗಳು ಶೇ. 1.9ಕ್ಕೆ ಕುಸಿಯುತ್ತಿದ್ದಾರೆ. ಹಿಂದೂಗಳ ಸಂಖ್ಯೆ ಹೆಚ್ಚಳವಾದಾಗ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಸಂಸ್ಥಾಪಕ ಡಾ. ಪ್ರವೀಣ ತೊಗಾಡಿಯಾ ಹೇಳಿದರು.

Advertisement

ನಗರದ ಶ್ರೀನಿವಾಸ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸನಾತನ ಹಿಂದೂ ಧರ್ಮ ಅಭಿಮಾನಿಗಳ `ಚಿಂತನಾ ಸಭೆ’ಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಸಲ್ಮಾನರ ಜನಸಂಖ್ಯೆಯ ಹೆಚ್ಚಳ ಹಿಂದುತ್ವಕ್ಕೆ ಮಾರಕವಾಗಿದೆ. ದೇಶ ಸ್ವತಂತ್ರವಾದ ನಂತರ ಹಿಂದೂಗಳ ಸಂಖ್ಯೆ ಶೇ. 86 ಇತ್ತು. ಈಗ ಶೇ. 78ರಷ್ಟು ಇದೆ. ಈ ಅಂಕಿ-ಅಂಶ ನಮ್ಮ ಧರ್ಮ ಅಳಿವಿನಂಚಿನಲ್ಲಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕಲಿಯುಗದಲ್ಲಿ ಸನಾತನ ಧರ್ಮದ ವಿರುದ್ಧ ಕುತಂತ್ರ ನಡೆಯುತ್ತಿದೆ. ಹಿಂದೂಗಳ ಸರ್ವನಾಶಕ್ಕಾಗಿ ಅನ್ಯ ಧರ್ಮಗಳು ಕಾಯುತ್ತಿವೆ. ಭಾರತದಲ್ಲಿನ ಹಿಂದೂಗಳು ಸುರಕ್ಷಿತರಾಗಲು ನಾವೆಲ್ಲರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಸದ್ಗುರು ಸದಾಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ದೇಶದ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರಬೇಕು. ದೇಶದಲ್ಲಿ ಮೊದಲು ಮಂತ್ರಗಳು ಹುಟ್ಟಿದವು. ಇಂತಹ ಸಮೃದ್ಧ ದೇಶ ಕೋಟಿ-ಕೋಟಿ ವರ್ಷಗಳಿಂದ ಸಮೃದ್ಧವಾಗಿದೆ. ಆದರೆ, ಕಳೆದೊಂದು ಸಾವಿರ ವರ್ಷಗಳಿಂದ ಹಲವಾರು ಮುಖಗಳಿಂದ ಲೂಟಿಗೆ ಒಳಗಾಯಿತು. ನಾವು ಹೃದಯದಲ್ಲಿ ಭಗವಂತನನ್ನು ಕಂಡಿದ್ದೇವೆ. ಭಗವಂತನ ಆರಾಧನೆ ನಿರಂತರವಾಗಿ ನಡೆಯಬೇಕೆಂದೇ ದೇವಸ್ಥಾನಗಳು ನಿರ್ಮಾಣವಾಗಿವೆ. ಇಂತಹ ಸಮೃದ್ಧ, ವಿಶಾಲ ದೇಶ ಇಂದು ನಿಧಾನವಾಗಿ ಹಂಚಿ ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನದಿಗಳು, ಸೂರ್ಯ, ಅಗ್ನಿ, ಭೂಮಿಯನ್ನು ಪೂಜಿಸುವವನು ನಿಜವಾದ ಸನಾತನಿಯಾಗಿದ್ದಾನೆ. ಸನಾತನ ಸಮುದಾಯ ಉಳಿಯಬೇಕೆಂದರೆ ನಮ್ಮಲ್ಲಿನ ಜಾತೀಯತೆ ಹೋಗಬೇಕು. ಜಾತಿಯನ್ನು ಆಧರಿಸಿ ಗುರುತಿಸಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಜಾತಿಗೊಂದು ಮಠ ಉದಯವಾಗಿ ಭಾರತವನ್ನು ತುಂಡು ಮಾಡುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ಇದರಿಂದ ಭಾರತ ಕ್ಷೋಭೆಗೆ ಒಳಗಾಗಿದೆ. ಹಿಂದೂಗಳು ಇದಾವುದಕ್ಕೂ ಕಿವಿಗೊಡದೆ ಧರ್ಮದ ಉಳಿವಿಗಾಗಿ ಬಾಳಬೇಕು. ಸಾವಿರಾರು ವರ್ಷಗಳ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಅವಶ್ಯಕತೆ ಇದ್ದು, ರಾಜಕಾರಣಕ್ಕಾಗಿ ಧರ್ಮ ಮಾಡುವ ಯಾರನ್ನೂ ನಂಬಬಾರದು ಎಂದು ಹಿಂದೂಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಹಿಂದೂ ಸಮಾಜದ ಮುಖಂಡರಾದ ಶ್ರೀಕಾಂತ್ ಖಟವಟೆ, ರಮೇಶ್ ಕುಲಕರ್ಣಿ, ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ, ಮಹೇಶ್ ರೋಖಡೆ, ಸೋಮು ಗುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೃತಪುರ ಸೇವಾ ಸಮಿತಿಯಿಂದ ಡಾ. ಪ್ರವೀಣ್ ತೊಗಾಡಿಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಿಂದುತ್ವಕ್ಕಾಗಿ ನನ್ನ ಹೋರಾಟವನ್ನು ಮುಡಿಪಾಗಿಟ್ಟಿದ್ದೇನೆ. ಕಳೆದ ನಾಲ್ಕು ದಶಕಗಳಿಂದ ದೇಶಾದ್ಯಂತ ಹಿಂದೂ ಸಂಘಟನೆ ಮಾಡಿದ್ದೇನೆ. ಮೊದಲು ಹಿಂದೂಗಳನ್ನು ಒಗ್ಗೂಡಿಸಲು ಗುಜರಾತ್‌ನಲ್ಲಿ 1989ರಲ್ಲಿ ಹೋರಾಟ ಅರಂಭಿಸಿದೆ. ನಂತರ ರಾಮ ಮಂದಿರ ನಿರ್ಮಾಣದ ಸಂಕಲ್ಪಕ್ಕಾಗಿ ಭಾರತದ ಎಲ್ಲ ಜಾತಿಗಳನ್ನು ಒಗ್ಗೂಡಿಸಲು ನನ್ನ ಜೀವನದಲ್ಲಿ ಎರಡನೇ ಹೊರಾಟಕ್ಕೆ ಇಳಿದೆ. ದೇಶದ ಮೂಲೆ ಮೂಲೆಯಲ್ಲಿ ಸಂಚರಿಸಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ `ಚಲೋ ಅಯೋಧ್ಯಾ’ ಕಾರ್ಯಕ್ರಮ ಆಯೋಜಿಸಿ ಇಂದು ಯಶಸ್ವಿಯಾಗಿದ್ದೇವೆ. ಹಿಂದೂಗಳ ಕನಸುಗಳನ್ನು ರಾಮಮಂದಿರದ ಮೂಲಕ ಈಡೇರಿಸಿದ ತೃಪ್ತಿ ನನಗಿದೆ ಡಾ. ಡಾ. ಪ್ರವೀಣ ತೊಗಾಡಿಯಾ ಹೇಳಿದರು.


Spread the love

LEAVE A REPLY

Please enter your comment!
Please enter your name here