ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಎಸ್ಎಸ್ಕೆ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಸಮಾಜದವರ ವತಿಯಿಂದ ಸಂಪ್ರದಾಯಬದ್ಧವಾದ ಪೂಜಾ ಕಾರ್ಯಕ್ರಮಕ್ಕೆ ವರ್ತಕರಾದ ಜೀವಣ್ಣ ಗೋಗಿ ಮತ್ತು ವಿಶ್ವನಾಥ ಮಹಾಂತಶೆಟ್ಟರ ಪೂಜೆ ನೆರವೇರಿಸಿ, ದೀಪ ಬೆಳಗಿಸುವ ಮೂಲಕ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ ಮಹಾಂತಶೆಟ್ಟರ, ನಮ್ಮದು ಭವ್ಯ ಪರಂಪರೆ, ಇತಿಹಾಸವನ್ನು ಹೊಂದಿದ ಪವಿತ್ರ ದೇಶವಾಗಿದೆ. ಪ್ರತಿಯೊಂದು ಹಬ್ಬ-ಹರಿದಿನಗಳ ಆಚರಣೆಯ ಹಿಂದೆ ಧಾರ್ಮಿಕವಾಗಿ ಹಾಗೂ ಐತಿಹಾಸಿಕ, ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳು ನಮಗೆ ಹೆಚ್ಚು ಶ್ರೇಷ್ಠವಾಗಿವೆ. ನಮ್ಮ ಮಕ್ಕಳಲ್ಲಿ ಇವುಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡುವದರ ಜೊತೆಗೆ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಮೂಲಕ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಶಕ್ತಿದೇವತೆ ಅಂಭಾಭವಾನಿ ದೇವಸ್ಥಾನ ಸಮಿತಿಯವರು ಮತ್ತು ಎಸ್ಎಸ್ಕೆ ಸಮಾಜದವರು ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಅದರಲ್ಲೂ ಘಟಸ್ಥಾಪನೆಯ ಪರ್ವಕಾಲದಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿರುವದು ನನ್ನ ಭಾಗ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಯು.ಡಬ್ಲ್ಯೂ.ಜೆ. ರಾಜ್ಯ ಪ್ರಶಸ್ತಿ ಪುರಸ್ಕೃತ ದಿಗಂಬರ ಪೂಜಾರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪರಶುರಾಮಸಾ ಬದಿ ವಹಿಸಿದ್ದರು. ಉಪಾಧ್ಯಕ್ಷ ನಾರಾಯಣಸಾ ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶರನ್ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ನಿತ್ಯ ಕಾಕಡಾರತಿ, ವಿಶೇಷ ಪೂಜೆ, ಪಾರಾಯಣ, ಪುರಾಣ ಪಠಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಹೇಳಿದರು.
ಎಸ್ಎಸ್ಕೆ ಸಮಾಜ ಟ್ರಸ್ಟ್ ಕಮಿಟಿ, ಎಸ್ಎಸ್ಕೆ ತರುಣ ಸಂಘ, ಮಹಿಳಾ ಮಂಡಳ, ಭಾವಸಾರ ಕ್ಷತ್ರಿಯ ಸಮಾಜ, ಗೋಂದಳಿ ಸಮಾಜದ ಮುಖಂಡರು ಹಾಜರಿದ್ದರು. ವಿಠ್ಠಲಸಾ ಶಿದ್ಲಿಂಗ್ ಸ್ವಾಗತಿಸಿದರು. ತರುಣ ಸಂಘದ ಅಧ್ಯಕ್ಷ ಭರತ ಬಾಕಳೆ ನಿರೂಪಿಸಿದರು.
ರಾಜ್ಯಮಟ್ಟದ ಗುರುಶ್ರೀ ಪ್ರಶಸ್ತಿಗೆ ಭಾಜನರಾದ ಬಿಆರ್ಪಿ ಈಶ್ವರ ಮೆಡ್ಲೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಇತಿಹಾಸ ವಿಶಿಷ್ಟವಾಗಿದೆ. ಸಹಸ್ರ ಅರ್ಜುನನ ಶಕ್ತಿ ಹಾಗೂ ಅಪಾರ ಬುದ್ಧಿಮತ್ತೆಯನ್ನು ಈ ಸಮಾಜ ಹೊಂದಿದೆ. ದುಷ್ಟರನ್ನು ಶಿಕ್ಷಿಸುವ ಮತ್ತು ಶಿಷ್ಟರನ್ನು ರಕ್ಷಿಸುವ ಉದ್ದೇಶವೇ ಈ ಸಹಸ್ರಾರ್ಜುನ ಸಮಾಜದ್ದಾಗಿದ್ದು, ಇಂತಹ ಸಮಾಜ ಪಟ್ಟಣದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.



