ಮೋದಿಯವರಿಗೆ ಸಮಾನಾದ ನಾಯಕರಿಲ್ಲ : ಬಸವರಾಜ ಬೊಮ್ಮಾಯಿ

0
bommay
Spread the love

ವಿಜಯಸಾಕ್ಷಿ ಸುದ್ದಿ, ಗದಗ/ರೋಣ : ಭಾರತ ಬದಲಾಗುತ್ತಿದೆ. ಬೇರೆ ದೇಶಗಳಿಗೆ ಪೈಪೋಟಿ ಕೊಟ್ಟು ಬೆಳೆಯುತ್ತಿದೆ. ಕೇವಲ ರಸ್ತೆ, ನೀರು ಕೊಡುವುದಷ್ಟೇ ಅಲ್ಲ, ಮಾಧ್ಯಮ, ಮೊಬೈಲ್ ಮೂಲಕ ಪ್ರತಿಯೊಬ್ಬರ ಕೈಯಲ್ಲಿ ಮಾಹಿತಿ ದೊರೆಯುತ್ತಿರುವುದರಿಂದ ಜಗತ್ತಿನ ಎಲ್ಲ ಮಾಹಿತಿ ದೊರೆಯುವಂತಾಗಿದೆ. ಎಲ್ಲರ ಕೈಗೆ ಮಾಹಿತಿ ತಂತ್ರಜ್ಞಾನ ನೀಡಿದ್ದು ಪ್ರಧಾನಿ ನರೆಂದ್ರ ಮೋದಿಯವರು ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ಗುರುವಾರ ರೋಣ ವಿಧಾನಸಭಾ ಕ್ಷೇತ್ರದ ಹಿರೇಹಾಳ, ಶಾಂತಗೇರಿ, ಮುಶಿಗೇರಿ ಹಾಗೂ ಇಟಗಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದಿಂದ ಇದುವರೆಗೂ ಬಡತನ ನಿರ್ಮೂಲನೆ ಆಗಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದಾರೆ. ರಾಜ್ಯದಲ್ಲಿ 36 ಲಕ್ಷ ಜನರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ದೊರೆತಿದೆ. 58 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಪ್ರಯೋಜನ ದೊರೆತಿದೆ. 12 ಲಕ್ಷ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಈ ಎಲ್ಲ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಮೋದಿಯವರು ಮಾಡಿದ್ದಾರೆ ಎಂದರು.

ಇಂಡಿಯಾ ಒಕ್ಕೂಟದ 26 ಪಕ್ಷಗಳಲ್ಲಿ ಮೋದಿಯವರ ಸಮಾನಾದ ನಾಯಕರು ಯಾರೂ ಇಲ್ಲ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ. ಸವಾಲನ್ನು ಸ್ವೀಕಾರ ಮಾಡಿ ಅದನ್ನು ಗೆಲುವಾಗಿ ಪರಿವರ್ತಿಸುವ ಛಲ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. ಹೀಗಾಗಿ ಮೋದಿಯವರು ಜನರ ನಾಯಕ ಆಗಿದ್ದಾರೆ ಎಂದು ಹೇಳಿದರು.

bommay

ನಾನು ವಿಧಾನ ಪರಿಷತ್ ಸದಸ್ಯನಾಗಿ ಈ ಭಾಗದಲ್ಲಿ ಕಳಸಾ ಬಂಡೂರಿ ಹೋರಾಟ ಮಾಡಿದ್ದೇನೆ. ಕಳಕಪ್ಪ ಬಂಡಿಯವರು ಶಾಸಕರಾದಾಗ ಈ ಭಾಗದ ಅಭಿವೃದ್ಧಿ ಆಗಿದೆ. ನಮ್ಮ ಶಿಗ್ಗಾವಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಆಗಿ ಈಗ ಔದ್ಯೋಗೀಕರಣ ಆಗುತ್ತಿದೆ. ಸುಮಾರು 10 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯುತ್ತಿದೆ. ನಾನು ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಸ್ಪರ್ಧೆ ಮಾಡಿದ್ದೇನೆ. ಕಳಕಪ್ಪ ಬಂಡಿಯವರಿಗೆ ಆಗಿರುವ ಅನ್ಯಾಯಕ್ಕೆ ಈ ಕ್ಷೇತ್ರದ ಅಭಿವೃದ್ಧಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

ಬಸವರಾಜ್ ಬೊಮ್ಮಾಯಿ ರೋಣ ವಿಧಾನಸಭಾ ಕ್ಷೇತ್ರದ ಹಿರೇಹಾಳ ಗ್ರಾಮಕ್ಕೆ ತಲುಪುತ್ತಿದ್ದಂತೆ ಮಳೆ ಸಿಂಚನವಾಯಿತು. ಮಳೆ ಹನಿಯ ನಡುವೆಯೇ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಮಳೆ ಶುಭ ಸಂಕೇತ. ಮಳೆ ಬಂದರೆ ಮೊದಿ ಸರ್ಕಾರ ಬರುತ್ತದೆ ಎಂಬ ಗ್ಯಾರಂಟಿ ಇದೆ. ಮಳೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ಹೇಳಿ ಬಸವರಾಜ ಬೊಮ್ಮಾಯಿ ತೆರಳಿದರು.

ಮೋದಿಯವರು 10 ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ವೇಗ ನೀಡಿದ್ದಾರೆ. ಅವರ ಗುರಿ ಮುಟ್ಟಲು ಮತ್ತೆ ಅವರನ್ನೇ ಪ್ರಧಾನ ಮಂತ್ರಿಯಾಗಿ ಮಾಡಬೇಕು. ಇಲ್ಲದಿದ್ದರೆ ನಾವು ಮತ್ತೆ ಹಿನ್ನಡೆ ಅನುಭವಿಸಬೇಕಾಗುತ್ತದೆ. ಮೋದಿಯವರು ನಗರದಿಂದ ಗ್ರಾಮೀಣದವರೆಗೆ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಿದ್ದಾರೆ. ಅವರು ಮತ್ತೆ ಬಂದರೆ ನಮ್ಮ ಊರು ಆರ್ಥಿಕವಾಗಿ ಸಬಲವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


Spread the love

LEAVE A REPLY

Please enter your comment!
Please enter your name here