ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ರಸ್ತೆಗಳ ಸುಧಾರಣೆಗೆ ವಿಶೇಷ ಅನುದಾನ ಕಲ್ಪಿಸುವಂತೆ ಕ್ರಿಯಾಯೋಜನೆಯೊಂದಿಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಅನುದಾನದ ಲಭ್ಯತೆಯ ಆಧಾರದಲ್ಲಿ ಪ್ರಮುಖ ರಸ್ತೆಗಳು ಸೇರಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಗುರುವಾರ ಗೊಜನೂರ ಗ್ರಾಮದಲ್ಲಿ ಲಕ್ಷ್ಮೇಶ್ವರ-ಗದಗ ಸಂಪರ್ಕಿಸುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯ ಆಯ್ದ ಭಾಗದಲ್ಲಿ 4 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗದಗ-ಲಕ್ಷ್ಮೇಶ್ವರ ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಸಾಕಷ್ಟು ಮಾಧ್ಯಮ ವರದಿಗಳು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿವೆ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಬಂಕಾಪುರ-ಗದಗವರೆಗೆ ಅಭಿವೃದ್ಧಿಪಡಿಸುವ ಬಗ್ಗೆ ಸಂಸದ ಬಸವರಾಜ ಬೊಮ್ಮಾಯಿ ಕೇಂದ್ರದ ಸಚಿವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಸರ್ಕಾರ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ನೀಡಿದ ಅನುದಾನದಲ್ಲಿ ಸೂರಣಗಿ, ಬಾಲೆಹೊಸೂರ, ಹೊಸಳ್ಳಿ ಇನ್ನಿತರ ಭಾಗದ ರಸ್ತೆಗಳ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಚಲವಾದಿ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಸಿ.ಪಿ. ಮಾಡಳ್ಳಿ, ರಮೇಶ ದನದಮನಿ, ಮಂಜುನಾಥ ಕಣವಿ, ಮುತ್ತಣ್ಣ ವಡಕಣ್ಣವರ, ಶಿವನಗೌಡ ಕಂಠಿಗೌಡರ, ನೀಲಪ್ಪ ಗುಡ್ಡಣ್ಣವರ, ಚಂದ್ರೇಗೌಡ ಪಾಟೀಲ, ನಿಂಗನಗೌಡ ಪಾಟೀಲ, ಹನಮಂತಪ್ಪ ಮಾದರ, ಮಹೇಶ ಅಥಣಿ, ಭೀಮಪ್ಪ ನಾಯಕ್, ದ್ಯಾಮಣ್ಣ ಅಡರಕಟ್ಟಿ, ಪಿಡಿಓ ಶಿವಾನಂದ ಮಾಳವಾಡ, ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ, ಹನುಮಂತೇಗೌಡ ಪಾಟೀಲ, ನಿಂಗನಗೌಡ ಕಣಿವಿ, ಶಂಭುಲಿಂಗಗೌಡ ಪಾಟೀಲ, ಮಾಬುಸಾಬ ಆನಿ, ರಾಕೇಶ ಪುರದ, ನೀಲಪ್ಪಗೌಡ ಪಾಟೀಟ, ಪಂಚಾಕ್ಷರ ಸವಣೂರು, ಗುತ್ತಿಗೆದಾರ ಡಿ.ಎಂ. ಅಡರಕಟ್ಟಿ ಮತ್ತಿತರರಿದ್ದರು.
ಈ ರಸ್ತೆಯಲ್ಲಿ ಓವರ್ಲೋಡ್ನೊಂದಿಗೆ ಟಿಪ್ಪರ್ಗಳು ಸಂಚರಿಸುವುದರಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಕಳಪೆ ಕಾಮಗಾರಿ ನಡೆದಿರುವದು ಕಂಡು ಬಂದಲ್ಲಿ ತಕ್ಷಣದಲ್ಲಿ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ. ಯಾವುದೇ ಹಂತದಲ್ಲಿಯೂ ಗುಣಮಟ್ಟದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಗುತ್ತಿಗೆದಾರರಿಗೆ ಸೂಚ್ಯವಾಗಿ ಹೇಳಿದರಲ್ಲದೆ, ಜೂನ್ ತಿಂಗಳೊಳಗೆ ಕಾಮಗಾರಿಯನ್ನು ಮುಗಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.