ಬೆಂಗಳೂರು: ಸಿಎಂ ಮತ್ತು ಡಿಸಿಎಂ ಮಧ್ಯೆ ಯಾವ ಒಡಕಿಲ್ಲ. ಇದೆಲ್ಲವೂ ಕೆಲ ಮಾಧ್ಯಮಗಳ ಸೃಷ್ಟಿ ಮಾತ್ರ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಕಿತ್ತಾಟ, ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀವು ಒಗ್ಗಟ್ಟಿನ ಸರ್ಕಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ, ನಮ್ಮದು ಒಗ್ಗಟ್ಟಿನ ಸರ್ಕಾರ.
ನಮ್ಮಲ್ಲಿ ಒಗ್ಗಟ್ಟಿದೆ, ಏನೇ ಇದ್ದರೂ ಹೈಕಮಾಂಡ್ ಬಿಗ್ಬಾಸ್ನಿಂದ ಸಂದೇಶ ಬರುತ್ತದೆ. ಇದೆಲ್ಲಾ ಒಂದು ಗುಂಪಿನ ಮಾಧ್ಯಮಗಳ ಸೃಷ್ಟಿಯಷ್ಟೇ. ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ವಿಶ್ವಾಸ ಮೂಡಿಸಿದೆ. ಆದರೆ ಬಿಜೆಪಿಯಲ್ಲಿ ಎಲ್ಲ ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದಾರೆ.
ಅವರು ತಮ್ಮ ಭಿನ್ನಾಭಿಪ್ರಾಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅಟ್ಯಾಕ್ ಮಾಡಲು ಆಗ್ತಿಲ್ಲ. ಹಾಗಾಗಿ ಕರ್ನಾಟಕದ ಜನರ ಮೇಲೆ ರಾಜಕೀಯ ದಾಳಿ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂದು ಸಂಜೆ 6 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ, ಸಭೆಯಲ್ಲೂ ಹೈಕಮಾಂಡ್ ಅಧಿಕೃತ ಸಂದೇಶ ರವಾನಿಸುವ ಸಾಧ್ಯತೆಯಿದೆ ಎಂದು ಎಲ್ಲ ಬಣಗಳಿಗೂ ಬಿಸಿ ಮುಟ್ಟಿಸಿದರು. ಇವತ್ತಿನ ಸಭೆ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತಾ ಸಭೆಯಾಗಲಿದೆ. ಅಮಿತ್ ಷಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ದೇಶದ ಎಸ್ಸಿ, ಎಸ್ಟಿ, ಒಬಿಸಿ ಜನರಿಗೆ ಅಪಮಾನ ಮಾಡಿದ್ದಾರೆ. ದೇಶದಲ್ಲಿ ಅಮಿತ್ ಷಾ ಅವರ ರಾಜೀನಾಮೆ ಕೇಳ್ತಿದ್ದೇವೆ, ಬೆಳಗಾವಿ ಸಮಾವೇಶದಲ್ಲೂ ಕೇಳುತ್ತಿದ್ದೇವೆ ಎಂದರು.