ರಕ್ತದಾನಕ್ಕೆ ಯಾವುದೂ ಸಾಟಿಯಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ, ಶ್ರೀ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮದರ್ಜೆ ಕಾಲೇಜು ಮುಂಡರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಜಾಥಾ ಕಾರ್ಯಕ್ರಮ ಜರುಗಿತು.

Advertisement

ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ, ರಕ್ತದಾನ ಶ್ರೇಷ್ಠದಾನ, ರಕ್ತದಾನ ಜೀವದಾನ, ರಕ್ತದಾನ ಮಹಾದಾನ ಎನ್ನುವಂತೆ ಎಲ್ಲರೂ ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹದಲ್ಲಿ ಚೈತನ್ಯ ಬರುವುದು. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಕೈಜೋಡಿಸಬೇಕು. ರಕ್ತದಾನದಂತೆ ಅಂಗಾಂಗದಾನವೂ ಮಹತ್ವದ್ದಾಗಿದ್ದು, ದಾನಿಗಳ ಸ್ಮರಣೆ ಮಾಡುವುದು ಸ್ತುತ್ಯಾರ್ಹವಾಗಿದೆ ಎಂದರು.

ಜಾಥಾ ಕಾರ್ಯಕ್ರಮವು ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮದರ್ಜೆ ಕಾಲೇಜಿನಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಡ್ಕೋ ಕಾಲನಿಯಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಸ್ವಾಗತಿಸಿದರು. ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ವಂದಿಸಿದರು. ಜಾಥಾ ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಲಕ್ಷ್ಮಣ ಪೂಜಾರ, ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳಾ ಸಜ್ಜನರ, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ. ಕಾವೇರಿ ಭೋಲಾ ಮತ್ತು ಪ್ರೊ. ತಿಮ್ಮನಾಯಕ ಸೇರಿದಂತೆ ಪ್ರಾದ್ಯಾಪಕ ವೃಂದದವರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಮಹಾವಿದ್ಯಾಲಯದ ಪ್ರೊ. ಉಮಾ ಕೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನಕ್ಕೆ ಸಾಟಿ ಯಾವುದೂ ಇಲ್ಲ. ಎಲ್ಲ ಆರೋಗ್ಯವಂತರು ಹಾಗೂ ಯುವಕರು ಗರ್ಭಿಣಿ ಮಹಿಳೆಯರಿಗೆ, ರಕ್ತಹೀನತೆ ಇರುವವರಿಗೆ ರಕ್ತದಾನ ಮಾಡುವುದರ ಮೂಲಕ ಮಾದರಿಯಾಗಬೇಕು. ಹಿಂದಿನ ಕಾಲದಲ್ಲಿ ಅನ್ನದಾನ, ನೇತ್ರದಾನ, ಗೋದಾನ, ಭೂದಾನ ಶ್ರೇಷ್ಠವಾಗಿದ್ದವು. ಅವೆಲ್ಲಕ್ಕಿಂತ ರಕ್ತದಾನ ಇಂದಿನ ಶ್ರೇಷ್ಠ ದಾನವಾಗಿದೆ. ರಕ್ತದಾನದಿಂದ ದಾನಿಯ ದೇಹದಲ್ಲಿ 24 ಗಂಟೆಯೊಳಗಾಗಿ ಹೊಸ ರಕ್ತದ ಉತ್ಪತ್ತಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here