ವಿಜಯಸಾಕ್ಷಿ ಸುದ್ದಿ, ರೋಣ: ಚುಟುಕು ಸಾಹಿತ್ಯದಿಂದಲೂ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಹಾ ಪ್ರಧಾನ ಕಾರ್ಯದರ್ಶಿ ವ್ಹಿ.ಬಿ. ಸೋಮನಕಟ್ಟಿಮಠ ಹೇಳಿದರು.
ಅವರು ರವಿವಾರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ರೋಣ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ ಹಾಗೂ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ನಾಡು-ನುಡಿ, ಸಂಸ್ಕೃತಿಗಳ ಉಳಿವಿಗಾಗಿ ಸಾಹಿತ್ಯ ಕ್ಷೇತ್ರ ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದೆ. ಅದರಲ್ಲಿ ಚುಟುಕು ಸಾಹಿತ್ಯ ಕೂಡ ಒಂದು. ನಾಲ್ಕು ಸಾಲುಗಳ ಚುಟುಕು ಸಾಹಿತ್ಯ ಮನುಷ್ಯನ ಮನಸ್ಸಿಗೆ ನಾಟುವ ಜೊತೆಗೆ ಅವನಲ್ಲಿ ಬದಲವಾಣೆ ತರುವ ಶಕ್ತಿಯನ್ನು ಹೊಂದಿದೆ. ಅಪ್ರತಿಮ ಶಕ್ತಿಯನ್ನು ಹೊಂದಿರುವ ಚುಟುಕು ಸಾಹಿತ್ಯವನ್ನು ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ತಾಲೂಕಾ ನೌಕರರ ಸಂಘದ ಅಧ್ಯಕ್ಷ ಎಸ್.ಜಿ. ದಾನಪ್ಪಗೌಡರ ಮಾತನಾಡಿ, ಸಾಹಿತ್ಯ, ಜಾನಪದ ಸಾಹಿತ್ಯ, ಚುಟುಕು ಸಾಹಿತ್ಯ, ಮಕ್ಕಳ ಸಾಹಿತ್ಯ ಇವುಗಳು ನಮ್ಮ ನಾಡಿನ ಹಿರಿಮೆಯನ್ನು ಎತ್ತಿಹಿಡಿದ ಗ್ರಂಥಗಳು. ಸಾಹಿತ್ಯದಿಂದ ಮಾತ್ರ ನಮ್ಮ ಪ್ರಾಚೀನ ಕಾಲದ ಆಗು-ಹೋಗುಗಳನ್ನು ತಿಳಿಯಬಲ್ಲೆವು ಎಂಬ ಸತ್ಯದ ಅರಿವು ನಮ್ಮಲ್ಲಿ ಬಂದಾಗ ಮಾತ್ರ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ವಾಯ್.ಡಿ. ಗಾಣಿಗೇರ, ಗಜೇಂದ್ರಗಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಣುಕಾ ಎವೂರ, ಸಾಹಿತಿ ಎಸ್.ಬಿ. ಹಿರೇಮಠ, ರೋಣ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿರೂಪಮ್ಮ ಹಿರೇಮಠ, ಕೃಷಿಕ ಸಮಾಜದ ನಿರ್ದೇಶಕ ಸಂಜಯ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ವಾಲ್ಮೀಕಿ ನಿರೂಪಿಸಿ ವಂದಿಸಿದರು.