ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಈ ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯಲ್ಲಿ ಅಧಿಕಾರ ದುರುಪಯೋಗ ಮತ್ತು ಅವ್ಯವಹಾರವಾಗಿದ್ದು, ಈ ಬಗ್ಗೆತನಿಖೆ ಮತ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪೌರಾಡಳಿತ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಸರ್ಕಾರದ ಅನುದಾನದಿಂದ ಇಂದಿರಾ ಕ್ಯಾಂಟೀನ್ಗೆ ನಿರ್ಮಾಣಗೊಂಡಿದ್ದರೂ ಸಹ ಪುರಸಭೆಯಿಂದಲೂ ಇಂದಿರಾ ಕ್ಯಾಂಟೀನ್ಗೆ ಬಣ್ಣ, ಇಲೆಕ್ಟ್ರಿಕಲ್, ಟೈಲ್ಸ್ ಸೇರಿ ಇತರೆ ಕಾರ್ಯಗಳಿಗೆ ಪುರಸಭೆಯಿಂದ ಅನುದಾನ ಖರ್ಚು ಹಾಕಲಾಗಿದೆ. ಹಿಂದಿನ ಅಧ್ಯಕ್ಷರ ವಾರ್ಡ್ನಲ್ಲಿ ಒಂದೇ ಕಡೆ 3 ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಪುರಸಭೆ ಅನುದಾನದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಾಣಕ್ಕೆ ಅನುದಾನ ಖರ್ಚು ಹಾಕಲಾಗಿದ್ದರೂ ಕೇವಲ ಫೌಂಡೇಶನ್/ಅಡಿಪಾಯ ಹಾಕಿ ಕೈಬಿಡಲಾಗಿದೆ. ಬೋರ್ವೆಲ್ ಹಾಕದೇ ಮೋಟರ್ ರಿಪೇರಿ, ವಿದ್ಯುತ್ ದುರಸ್ಥಿಗಾಗಿ ಬೋಗಸ್ ಬಿಲ್ ತೆಗೆಯಲಾಗಿದೆ ಇನ್ನೂ ಅನೇಕ ಅವ್ಯವಹಾರದ ಮಾಹಿತಿ ಗೊತ್ತಾಗಿದೆ. ಈ ಬಗ್ಗೆ ಸೂಕ್ತ ತನಿಖೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಪೌರಾಡಳಿತ ಇಲಾಖೆಗೆ ತನಿಖೆಗೆ ಪತ್ರದ ಮೂಲಕ ಕ್ರಮಕ್ಕೆ ಆಗ್ರಹಿಸುತ್ತೇನೆ.
ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಾಗುತ್ತಿರುವ ವಿಳಂಬ ಸರಿಪಡಿಸಿ ಸಾಧ್ಯವಾದಷ್ಟು ಬೇಗ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಮೃತ 2 ಯೋಜನೆಯಲ್ಲಿ 36 ಕೋಟಿ ರೂ ವೆಚ್ಚದಲ್ಲಿ ಹೊಸ ಪೈಪ್ಲೈನ್ ಅಳವಡಿಕೆ, ದುರಸ್ತಿ, ಜೋಡಣೆ ಕಾರ್ಯ ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದೆ. ಆದಷ್ಟು ಬೇಗ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದರು.



