ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗಬಾರದು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯು ಯಾವುದೇ ಕಾರಣಕ್ಕೂ ವಿಳಂಬವಾಗದೇ ನಿಗದಿತ ಸಮಯದಲ್ಲಿ ಜರುಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜನನ-ಮರಣ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಸರಿಯಾಗಿ ಮಾಹಿತಿದಾರರ ಹೆಸರು ಮತ್ತು ಸಹಿಯನ್ನು ಸಂಗ್ರಹಿಸಬೇಕು. ಅರ್ಜಿದಾರರ ಶುಲ್ಕವನ್ನು ನಿಯಮಿತವಾಗಿ ಸರ್ಕಾರಕ್ಕೆ ವಿಳಂಬ ಮಾಡದೇ ಜಮೆ ಮಾಡಬೇಕು. ನೋಂದಣಿ ಪ್ರಮಾಣಪತ್ರದಲ್ಲಿ ನೋಂದಣಾಧಿಕಾರಿಗಳ ಸಹಿ ಕಡ್ಡಾಯವಾಗಿರಬೇಕು. ಪ್ರಾಧಿಕಾರದ ಅನುಮತಿ ಇಲ್ಲದೇ ವಿಳಂಬ ನೋಂದಣಿ ಮಾಡಬಾರದು. ವಿನಾಕಾರಣ ವಿಳಂಬ ನೊಂದಣಿ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಕಾನೂನು ವರದಿಗಳಲ್ಲಿ ನೋಂದಣಿ ಸಂಖ್ಯೆ ಮತ್ತು ನೋಂದಣಿ ದಿನಾಂಕ ನಮೂದು ಮಾಡಬೇಕು. ತಹಸೀಲ್ದಾರರ ನೇತೃತ್ವದಲ್ಲಿ ತಾಲೂಕು ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳನ್ನು ನಿಯಮಿತವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಜನವರಿ 2025ರಿಂದ ಮಾರ್ಚ್ 2025ರವರೆಗೆ ಜಿಲ್ಲೆಯಲ್ಲಿ ಜನನ ವಿಳಂಬ ನೋಂದಣಿ ವಿವರದ ಕುರಿತಂತೆ 2170 ಘಟನೆಗಳು ನಿಗದಿತ ಸಮಯದಲ್ಲಿ ನೋಂದಣಿಯಾಗಿವೆ. 124 ಘಟನೆಗಳು 21ರಿಂದ 30 ದಿನಗಳೊಳಗೆ ನೋಂದಣಿಯಾಗಿವೆ. 470 ಘಟನೆಗಳು 30 ದಿನಗಳ ಮೇಲೆ ಒಂದು ವರ್ಷದೊಳಗೆ ನೊಂದಣಿಯಾಗಿವೆ. 395 ಘಟನೆಗಳು ಒಂದು ವರ್ಷದ ಮೇಲ್ಪಟ್ಟು ನೋಂದಣಿಯಾಗಿವೆ. ಜನೆವರಿ 2025ರಿಂದ ಮಾರ್ಚ್ 2025ರವರೆಗೆ ಮರಣ ವಿಳಂಬ ನೋಂದಣಿ ವಿವರ ಕುರಿತಂತೆ ಜಿಲ್ಲೆಯಲ್ಲಿ 1494 ಘಟನೆಗಳು ನಿಗದಿತ ಸಮಯದಲ್ಲಿ ನೋಂದಣಿಯಾಗಿವೆ. 173 ಘಟನೆಗಳು 21ರಿಂದ 30 ದಿನಗಳೊಳಗಾಗಿ ನೊಂದಣಿಯಾಗಿವೆ. 382 ಘಟನೆಗಳು 30 ದಿನಗಳ ಮೇಲೆ ಒಂದು ವರ್ಷದ ಒಳಗಾಗಿ ನೊಂದಣಿಯಾಗಿವೆ. 173 ಘಟನೆಗಳು ಒಂದು ವರ್ಷದ ಮೇಲ್ಪಟ್ಟು ನೋಂದಣಿಯಾಗಿವೆ. 2024ನೇ ವರ್ಷದಲ್ಲಿ ತಾಲೂಕಾವಾರು ಜನನ ಮರಣ ನೋಂದಣಿ /ಉಪನೋಂದಣಿ ಘಟಕಗಳಿಗೆ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 330 ನೋಂದಣಿ ಘಟಕಗಳು, 367 ಉಪ ನೋಂದಣಿ ಘಟಕಗಳು ಹಾಗೂ ನಗರ ಪ್ರದೇಶಗಳಲ್ಲಿ 9 ನೋಂದಣಿ ಘಟಕ, 12 ಉಪ ನೋಂದಣಿ ಘಟಕಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಲೆಕ್ಕಿಗರು ನೋಂದಣಾಧಿಕಾರಿಯಾಗಿರುತ್ತಾರೆ. ಪಿಡಿಓ ಮತ್ತು ಸಿಎಚ್‌ಸಿ ಮುಖ್ಯಸ್ಥರು ಉಪನೋಂದಣಾಧಿಕಾರಿಗಳಾಗಿರುತ್ತಾರೆ. ನಗರ ಪ್ರದೇಶದಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳಾಗಿದ್ದು, ಆಸ್ಪತ್ರೆಯ ಮುಖ್ಯಸ್ಥರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪ ನೋಂದಣಾಧಿಕಾರಿಗಳಾಗಿರುತ್ತಾರೆ. ನಮೂನೆ 1–ಜನನ, ನಮೂನೆ 2-ಮರಣ, ನಮೂನೆ 3-ನಿರ್ಜೀವ ಜನನ ಇವುಗಳನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು ಎಂದರು.


Spread the love

LEAVE A REPLY

Please enter your comment!
Please enter your name here