ದಾವಣಗೆರೆ:- ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಮೀನೊಂದರಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಫಸಲಿಗೆ ಬಂದಿದ್ದ 7.50 ಲಕ್ಷ ರೂ. ಮೌಲ್ಯದ ದಾಳಿಂಬೆಯನ್ನು ರಾತ್ರೋ ರಾತ್ರಿ ಖದೀಮರು ಕಳ್ಳತನ ಮಾಡಿರುವ ಘಟನೆ ಜರುಗಿದೆ.
Advertisement
ರವಿಕುಮಾರ್ ಎಂಬ ರೈತನಿಗೆ ಸೇರಿದ್ದ ಜಮೀನಿನಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. 10 ಲಕ್ಷ ರೂ. ಬಂಡವಾಳ ಹೂಡಿ, ಎರಡು ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆದಿದ್ದರು. ಉತ್ತಮ ಫಸಲು ಬಂದಿದ್ದು, ಇನ್ನೆರಡು ದಿನದಲ್ಲಿ ಕಟಾವು ಮಾಡಬೇಕಿತ್ತು. ಆದರೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 7.50 ಲಕ್ಷ ರೂ. ಮೌಲ್ಯದ ದಾಳಿಂಬೆ ಕಳವು ಮಾಡಿದ್ದಾರೆ.
ಮಾರನೇ ದಿನ ಜಮೀನಿಗೆ ಹೋದ ರೈತನಿಗೆ ದಾಳಿಂಬೆ ಕಳ್ಳತನ ವಿಷಯ ತಿಳಿದು ಸಿಡಿಲು ಬಡಿದಂತಾಗಿದೆ. ಸದ್ಯ ರೈತ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.