ವಿಜಯಸಾಕ್ಷಿ ಸುದ್ದಿ, ರಾಣೆಬೆನ್ನೂರು: ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಇತಿಹಾಸದಲ್ಲಿ ಯಾವ ರೀತಿ ತುರ್ತು ಪರಿಸ್ಥಿತಿಯ ಕರಾಳ ಅಂತ್ಯವಾಗಿತ್ತೊ, ಅದೇ ರೀತಿ ರಾಜ್ಯ ಕಾಂಗ್ರೆಸ್ ಆಡಳಿತವೂ ಅಂತ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶನಿವಾರ ನಗರದ ಶ್ರೀ ನೀಲಕಂಠೇಶ್ವರ ಸಭಾಭವನದಲ್ಲಿ `ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್-ರಾಣೆಬೆನ್ನೂರು’ ಏರ್ಪಡಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂದಿನ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವನ್ನು ನೆನಪಿಸಿಕೊಂಡ ಸಂಸದರು, ನಮಗೆ ರಾಜಕಾರಣ ಗೊತ್ತಿರಲಿಲ್ಲ. ಸ್ವಾತಂತ್ರ್ಯ ಅಂದರೇನು, ಈ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂದಿದೆ ಎಂಬುದು ಗೊತ್ತಿತ್ತು. ಅದಕ್ಕೆ ಧಕ್ಕೆ ಬಂದಿದೆ ಅಂದಾಗ ನಮ್ಮ ರಕ್ತ ಕುದಿಯುತ್ತಿತ್ತು. ಆ ಸಂದರ್ಭದಲ್ಲಿ ದೇಶಾದ್ಯಂತ ಒಟ್ಟು 6632 ಕೇಸ್ಗಳನ್ನು ಹಾಕಿದ್ದರು. 4230 ಕೇಸ್ಗಳನ್ನು ಆರ್ಎಸ್ಎಸ್ ಮೇಲೆ ಹಾಕಲಾಗಿತ್ತು. ಈ ತುರ್ತು ಪರಿಸ್ಥಿತಿಯನ್ನು ತೀವ್ರ ವಿರೋಧ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೇಳಿದರು.
ಆಗ ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ ಎಂದು ಹೇಳುತ್ತಿದ್ದರು. ಕಾಂಗ್ರೆಸ್ನಲ್ಲಿ ಗುಲಾಮಗಿರಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ನಾವು ಭಾರತ ಮಾತಾಕಿ ಜೈ ಎಂದು ಕರೆಯುತ್ತೇವೆ. ಕಾಂಗ್ರೆಸ್ನವರು ಸೋನಿಯಾ ಮಾತಾಕಿ ಜೈ ಎನ್ನುತ್ತಾರೆ. ನಮಗೂ ಕಾಂಗ್ರೆಸ್ನವರಿಗೂ ಅಷ್ಟೇ ವ್ಯತ್ಯಾಸ ಎಂದು ಹೇಳಿದರು.
2026ಕ್ಕೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರ ಪಾಪದ ಕೊಡ ತುಂಬಿದೆ. ನಾವು ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ವಿಕಸಿತ ಭಾರತದ ಪ್ರಧಾನಿಗಳ ಕನಸು ನನಸು ಮಾಡಲು ನಾವೆಲ್ಲ ನಿರಂತರವಾಗಿ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ರಾಜ್ಯ ತುರ್ತು ಪರಿಸ್ಥಿತಿ ಸಮಿತಿಯ ಸಂಚಾಲಕ ಮಹೇಂದ್ರ ಕೌತಾಳ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ರಾಮಕೃಷ್ಣ ತುಕಾರಾಮ ತಾಂಬೆ ಸೇರಿದಂತೆ
ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರಾದರೂ ಕೋಮುವಾದಿ ರೀತಿ ಭಾಷಣ ಮಾಡಿದರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವದು ಎಂದು ಹೇಳಿದ್ದಾರೆ. ಕರ್ನಾಟಕವನ್ನು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದರೆ ಅದು ಸಾಧ್ಯವಿಲ್ಲ. ಯಾವಾಗ ರಾಜಶಕ್ತಿ ಮತ್ತು ಪ್ರಜಾಶಕ್ತಿ ನಡುವೆ ಸಂಘರ್ಷವಾಗುತ್ತದೆಯೋ ಆಗ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಇತಿಹಾಸದಲ್ಲಿ ಯಾವ ರೀತಿ ತುರ್ತು ಪರಿಸ್ಥಿತಿ ಕರಾಳವಾಗಿ ಅಂತ್ಯವಾಗಿತ್ತೋ ಅದೇ ರೀತಿ ನಿಮ್ಮ ಆಡಳಿತವೂ ಅಂತ್ಯವಾಗುತ್ತದೆ. ಅಧಿಕಾರದಲ್ಲಿ ಜನಪರ ಕೆಲಸ ಮಾಡಬೇಕು, ಏಕಪಕ್ಷೀಯವಾದ ತುಷ್ಠೀಕರಣದ ರಾಜಕಾರಣ ಅಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.