ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭವಿಷ್ಯತ್ತಿನ ಸುಭದ್ರ, ಸುರಕ್ಷಿತದ ದೃಷ್ಟಿಯಿಂದ ಎಲ್ಲರೂ ಗಿಡಮರಗಳನ್ನು ಬೆಳೆಸುವ, ರಕ್ಷಿಸುವ ಕಾರ್ಯ ಮಾಡಲೇಬೇಕು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಮಂಗಳವಾರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾದ `ಸಾವಿರ ವೃಕ್ಷ ಪ್ರಕೃತಿ ಸುಭಿಕ್ಷ’ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೇವಲ ಜೂನ್ ತಿಂಗಳಲ್ಲಿ ಮಾತ್ರ ಸಸಿ ನೆಟ್ಟು ಪ್ರಚಾರ ಪಡೆದ ನಂತರ ನೆಟ್ಟ ಸಸಿಗೆ ಹನಿ ನೀರು ಹಾಕುವುದನ್ನೂ ಮರೆತರೆ ನೆಟ್ಟ ಸಸಿ ಒಣಗಿ ಹೋಗುತ್ತದೆ, ಇದು ಉತ್ತಮ ಕಾರ್ಯವಲ್ಲ. ಬದಲಾಗಿ ಭೂಮಿಯ ಮೇಲಿನ ಜೀವ ಸಂಕುಲದ ಭವಿಷ್ಯಕ್ಕಾಗಿ ಪರಿಸರ ಸ್ನೇಹಿ ಸಮಾಜ ನಿರ್ಮಿಸುವ ಹೊಣೆ ಎಲ್ಲರದ್ದಾಗಿದೆ. ಮಕ್ಕಳನ್ನು ಪೋಷಿಸಿದಂತೆ ಅರಣ್ಯ ಬೆಳೆಸುವ ಕಾರ್ಯವನ್ನು ನಿತ್ಯನೂತನವಾಗಿಸಬೇಕು ಎಂದರು.
ಪ್ರತಿಷ್ಠಾನದ ನಿರ್ದೇಶಕಿ ಸಂಗೀತಾ ಧರ್ಮಾಯತ ಮಾತನಾಡಿ, ಫೌಂಡೇಷನ್ ಸಂಸ್ಥಾಪಕರಾದ ಶ್ರೀ ಗುರುರಾಜ್ ಗುರೂಜಿ ಹಾಗೂ ಸಿಇಓ ಪ್ರಜ್ವಲ್ ನಾಯಕ ಮಾರ್ಗದರ್ಶನದಲ್ಲಿ ಜೂನ್ ತಿಂಗಳು ಪೂರ್ತಿ ಕರ್ನಾಟಕದ 27 ಉಪ ಶಾಖೆಯಲ್ಲಿ ಅಭಿಯಾನದಡಿ ಸಸಿ ನೆಡುವ, ಪೋಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅರಳು ವಿಶೇಷ ಶಾಲೆಯ ಮುಖ್ಯೋಪಾಧ್ಯಾಯೆ ನೀಲಮ್ಮ ದಾಸಪ್ಪನವರ ಮಾತನಾಡಿದರು. ನಂತರ ಪ್ರತಿಷ್ಠಾನದ ಸೇವಾಕರ್ತರು ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂಧ್ಯ ಮಕ್ಕಳ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಸಿ ನೆಡಲಾಯಿತು. ನಂದಾ ಧರ್ಮಾಯತ, ಮಂಜುಳಾ ಮುಳಗುಂದ, ವೀರೇಶ ಹಳೆಮನೆ, ಗುರುಪ್ರಸಾದ ಹಿರೇಮಠ ಇತರರು ಭಾಗವಹಿಸಿದ್ದರು.