ಮೂವರು ದಲಿತ ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ: ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳಿಸಿರುವ ಆರೋಪ!?

0
Spread the love

ಗದಗ:-ರಾಜ್ಯದಲ್ಲಿ ಅಸ್ಪೃಷ್ಯತೆ ಆಚರಣೆ ಇನ್ನೂ ಜೀವಂತವಾಗಿಯೇ ಇದೆ. ರಾಜ್ಯದ ಕೆಲವು ಗ್ರಾಮಗಳಲ್ಲಿ ದಲಿತರಿಗೆ ಆಗುತ್ತಿರುವ ಅವಮಾನ, ಹಿಂಸೆ ಆಗಾಗ ವರದಿ ಆಗುತ್ತಲೇ ಇರುತ್ತದೆ. ಅದರಂತೆ ಗದಗ ಜಿಲ್ಲೆಯಲ್ಲೂ ಅಸ್ಪೃಶ್ಯತೆ ತಾಂಡವವಾಡುತ್ತಿದ್ಯಾ!? ಎಂಬ ಪ್ರಶ್ನೆ ಇದೀಗ ಮೂಡಿದೆ. ಎಸ್, ಕಾಲ ಎಷ್ಟೇ ಬದಲಾದರೂ ಜನರ ಮನಸ್ಥಿತಿ ಮಾತ್ರ ಹಾಗೆ ಇದೆ ಮರ್ರೆ. ಜಾತಿ-ಜಾತಿ ಎಂದು ಮನುಷ್ಯತ್ವವನ್ನೇ ಮರೆಯುತ್ತಿದ್ದಾರೆ.

Advertisement

ಅದರಂತೆ ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂದು ಆರೋಪಿಸಿ ಮೂವರು ದಲಿತ ಯುವಕರಿಗೆ 60 ಸವರ್ಣೀಯರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಜರುಗಿದೆ. ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಮತ್ತು​​ ಚುಡಾಯಿಸಿದ್ದಕ್ಕೆ ಧ್ವಜದ ಕಂಬಕ್ಕೆ ಕಟ್ಟಿಹಾಕಿ ಹಗ್ಗ, ದೊಣ್ಣೆ, ಚಪ್ಪಲಿಯಿಂದ ಮೈ ತುಂಬಾ ಬಾಸುಂಡೆ ಬರುವಂತೆ ಯುವಕರಿಗೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 28ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನೂ ಯುವಕರನ್ನು ಕಾಪಾಡಲು ಬಂದ ಪೋಷಕರಿಗೆ ಸವರ್ಣೀಯರು ಧಮ್ಕಿ ಹಾಕಿ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಮ್ಮೂರಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಾಗುವ ಮುನ್ನ ಎರಡು ಕಡೆಯಿಂದ ರಾಜಿ ಮಾಡಿಕೊಂಡಿರುವ ಬಗ್ಗೆ ಹಿಂಬರಹ‌ ನೀಡಲಾಗಿತ್ತಂತೆ. ಆದರೆ ಹಲ್ಲೆಗೊಳಗಾದ ಬಾಲಕನೊಬ್ಬ ಅವಮಾನ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಇತ್ತ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಅಂತ ದಲಿತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ಸವರ್ಣೀಯರಿಂದಲೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ದೂರು-ಪ್ರತಿದೂರು ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಲಿದೆ.


Spread the love

LEAVE A REPLY

Please enter your comment!
Please enter your name here