ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಮಣಿರತ್ನಂ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವು ಅದ್ಭುತ ಸಿನಿಮಾಗಳನ್ನು ಮಾಡಿರುವ ಮಣಿರತ್ನಂ ತಮ್ಮ ಸಿನಿಮಾಗಳನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಹಲವು ಭಾರಿ ಧನ್ಯವಾದ ಹೇಳಿದ್ದಾರೆ. ಇದೀಗ ಇದೇ ಮೊದಲ ಭಾರಿಗೆ ತಮ್ಮ ಸಿನಿಮಾ ಹೀನಾಯ ಸೋಲು ಕಂಡಿದ್ದು ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿದ್ದಾರೆ.
ಕಮಲ್ ಹಾಸನ್, ತ್ರಿಷಾ, ಸಿಂಬು ಸೇರಿದಂತೆ ಇನ್ನೂ ಹಲವರು ನಟಿಸಿರುವ ಮಣಿರತ್ನಂ ನಿರ್ದೇಶಕ ಥಗ್ ಲೈಫ್ ಸಿನಿಮಾ ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿತ್ತು. ಅತ್ತ ಕಮಲ್ ಹಾಸನ್ ನೀಡಿದ ಕನ್ನಡ ವಿರೋಧಿ ಹೇಳಿಕೆಯಿಂದ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ತಡೆ ನೀಡಲಾಯ್ತು. ಉಳಿದ ಕಡೆ ಸಿನಿಮಾ ರಿಲೀಸ್ ಆದರೂ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸಿನಿಮಾ ಸಕ್ಸಸ್ ಆಗಲಿಲ್ಲ.
ಇದೀಗ ತೆಲುಗು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಮಣಿರತ್ನಂ, ‘ನಮ್ಮಿಬ್ಬರಿಂದ (ಮಣಿರತ್ನಂ-ಕಮಲ್ ಹಾಸನ್) ‘ನಾಯಗನ್’ ರೀತಿಯ ಸಿನಿಮಾ ನಿರೀಕ್ಷೆ ಮಾಡುತ್ತಿದ್ದ ಸಿನಿಮಾ ಪ್ರೇಮಿಗಳಿಗೆ ನಾನು ಬೇಷರತ್ ಕ್ಷಮೆ ಯಾಚಿಸುತ್ತೇನೆ. ನಮಗೆ ಮತ್ತೆ ಹಿಂದಕ್ಕೆ ಹೋಗುವುದಕ್ಕೆ ಇಷ್ಟವಿರಲಿಲ್ಲ. ಹೋಗುವುದಾದರೂ ಏಕೆ? ನಾವು ಹೊಸದಾಗಿಯೇ ಏನನ್ನಾದರೂ ಕೊಡಬೇಕು ಎಂದುಕೊಂಡೆವು. ಪ್ರೇಕ್ಷಕರು ಬೇರೆ ಏನೋ ನಿರೀಕ್ಷೆ ಮಾಡಿದ್ದರು, ಆದರೆ ಅವರು ನಿರೀಕ್ಷಿಸಿದಕ್ಕಿಂತಲೂ ಬಹಳ ಭಿನ್ನವಾದುದನ್ನು ನಾವು ಕೊಟ್ಟೆವು, ಇದರಿಂದ ಅವರಿಗೆ ಭ್ರಮನಿರಸನವಾಯ್ತು’ ಎಂದಿದ್ದಾರೆ.