ತುಮಕೂರು: ಸಿಎಂ ಬದಲಾವಣೆ ಅನ್ನೋದನ್ನು ಕಾಲ ನಿರ್ಣಯ ಮಾಡಲಿದೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಅನ್ನೋದನ್ನು ಕಾಲ ನಿರ್ಣಯ ಮಾಡಲಿದೆ.
ಕೆಲ ಮಾಧ್ಯಮದವರು ರಾಜಣ್ಣನವರು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ನಾನು ಯಾವತ್ತೂ ಸಿಎಂ ಸಿದ್ದರಾಮಯ್ಯರ ಜೊತೆ ಇದ್ದೇನೆ. ಇವತ್ತೂ, ನಾಳೆ, ಯಾವತ್ತೂ ನಾನು ಸಿದ್ದರಾಮಯ್ಯ ಬಣ ಎಂದು ಹೇಳಿದರು.
ಆಗಸ್ಟ್- ಸೆಪ್ಟೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ರಾಂತಿ ಎಂದರೆ ಹಸಿರು ಕ್ರಾಂತಿಯೂ ಆಗಬಹುದು ಅಲ್ವಾ? ಬರೀ ಕಾಂಗ್ರೆಸ್ನಲ್ಲಿ ಮಾತ್ರ ಕ್ರಾಂತಿ ಎಂದು ಯಾಕೆ ಭಾವಿಸುತ್ತೀರಾ? ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ.
ಕೇಂದ್ರದಲ್ಲೂ ಕ್ರಾಂತಿ ಆಗಬಹುದು. ಬಿಜೆಪಿಯಲ್ಲೂ 75 ವರ್ಷದ ನಂತರ ಹುದ್ದೆಯಿಂದ ಕೆಳಗೆ ಇಳಿಬೇಕು. 75 ವರ್ಷ ಆದ ಕಾರಣ ಅಡ್ವಾಣಿಯನ್ನು ಪ್ರಧಾನಿ ಹುದ್ದೆಯಿಂದ ತಪ್ಪಿಸಿದರು, ಅಲ್ಲೂ ಕ್ರಾಂತಿ ಆಗಬಹುದು. ರಾಜಕಾರಣ ಬದಲಾವಣೆಯ ನಿಯಮ ಹೊಂದಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.