ರಾಷ್ಟ್ರಭಕ್ತಿ ಸ್ಫುರಿಸಿದ `ತಿರಂಗಾ ಯಾತ್ರೆ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬಳಿಕ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಪಾಠ ಕಲಿಸಲು ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ನಡೆಸಿದ `ಆಪರೇಷನ್ ಸಿಂಧೂರ’ಕ್ಕೆ ಬೆಂಬಲಿಸುವ ಹಾಗೂ ಸೈನಿಕರ ಕಾರ್ಯವನ್ನು ಶ್ಲಾಘಿಸುವ ಉದ್ದೇಶದಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ ನಗರದಲ್ಲಿ ತಿರಂಗಾ ಯಾತ್ರೆ ಜರುಗಿತು.

Advertisement

ಶುಕ್ರವಾರ ಸಂಜೆ ಸುರಿಯುತ್ತಿರುವ ಮಳೆಯಲ್ಲಿಯೇ ನಗರದ ಜೋಡು ಮಾರುತಿ ದೇವಸ್ಥಾನದಿಂದ ಪ್ರಾರಂಭಗೊಂಡ ತಿರಂಗಾ ಯಾತ್ರೆಯು ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಿತು. ದಾರಿಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಸುರಿಯುತ್ತಿದ್ದ ಮಳೆಯಲ್ಲಿ ನೆನೆಯುತ್ತಲೇ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ ಯಾತ್ರೆಗೆ ಚಾಲನೆ ನೀಡಿ, ಹೆಜ್ಜೆ ಹಾಕಿದ್ದು, ನೆರೆದಿದ್ದವರಲ್ಲಿ ದೇಶಾಭಿಮಾನವನ್ನು ಇಮ್ಮಡಿಗೊಳಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪಾಕಿಸ್ತಾನದ ಪ್ರಚೋದಿತ ಉಗ್ರರಿಂದ ನಡೆದ ಹತ್ಯಾಕಾಂಡವು ಸಮಗ್ರ ಭಾರತೀಯರ ಸ್ವಾಭಿಮಾನಕ್ಕೆ ಮಾಡಿದ ಅವಮಾನವಾಗಿದೆ. ದೇಶದಲ್ಲಿ ಅಶಾಂತಿ, ಅಸ್ಥಿರತೆ ಸೃಷ್ಟಿಗೆ ಪಾಕಿಸ್ತಾನ ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ, ಇಂತಹ ಪೈಶಾಚಿಕ ಕೃತ್ಯಗಳು ಯಶಸ್ಸು ಸಾಧಿಸದಂತೆ ನಾವೆಲ್ಲರು ಒಗ್ಗೂಡಿ ಜಾಗೃತರಾಗಬೇಕಿದೆ ಎಂದು ಹೇಳಿದರು.

ಆಪರೇಷನ್ ಸಿಂಧೂರ ಮೂಲಕ ನಮ್ಮ ಸೇನಾಪಡೆಗಳು ಮತ್ತು ಕೇಂದ್ರ ಸರ್ಕಾರ ಉಗ್ರರ ಹಾಗೂ ಅದರ ಪೋಷಕ ಪಾತ್ರ ನಿರ್ವಹಿಸುತ್ತಿರುವ ಪಾಕಿಸ್ತಾನಕ್ಕೆ ನಿಖರ ಹಾಗು ಗರಿಷ್ಠ ಪ್ರಮಾಣದ ಶಿಕ್ಷೆಯನ್ನ ಈಗಾಗಲೇ ನೀಡಿವೆ. ದೇಶದ ಹಿತಕ್ಕಾಗಿ ಗಡಿಯಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಭಾರತೀಯ ಸೈನಿಕರ ಜೊತೆಗೆ ಜವಾಬ್ದಾರಿಯುತ ನಾಗರಿಕರಾದ ನಾವೆಲ್ಲರೂ ನಿಲ್ಲಬೇಕಿದೆ. ಆ ಮೂಲಕ ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನ ಸಾಕ್ಷೀಕರಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮೀಜಿ, ಯುವ ಮುಖಂಡ ಉಮೇಶಗೌಡ ಸಿ.ಪಾಟೀಲ, ನಗರಸಭೆ ಸದಸ್ಯ ಚಂದ್ರು ತಡಸದ, ಮುಖಂಡರಾದ ಪ್ರಶಾಂತ ನಾಯ್ಕರ, ಮಹಾಂತೇಶ ಬಾತಾಖಾನಿ, ವಸಂತ ಮೇಟಿ, ಆರ್.ಬಿ. ದಾನಪ್ಪಗೌಡ್ರ, ಶಿವರಾಜಗೌಡ ಹಿರೇಮನಿಪಾಟೀಲ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಅನೇಕರು ಇದ್ದರು.

ಸಾರ್ವಜನಿಕರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ವಕೀಲರು, ವೈದ್ಯರು, ರೈತರು, ಶಿಕ್ಷಕರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ವ್ಯಾಪಾರಸ್ಥರು, ವಿವಿಧ ಕ್ಷೇತ್ರದ ವೃತ್ತಿಪರರು ಹೆಮ್ಮೆಯ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಮಾಜಿ ಸೈನಿಕರ ಸಾಥ್

ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾಧಕ್ಷ ಬಸಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ನೂರಾರು ಮಾಜಿ ಸೈನಿಕರು ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಿ ಗಮನ ಸೆಳೆದರು.


Spread the love

LEAVE A REPLY

Please enter your comment!
Please enter your name here