ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈಗಿನವರು ಹಬ್ಬಗಳನ್ನು ಆಚರಿಸುವಂತೆ ಜನಪದರೂ ಹಬ್ಬ ಹರಿದಿನಗಳನ್ನು ತುಂಬಾ ವಿಶೆಷವಾಗಿ ಆಚರಿಸುತ್ತಿದ್ದರು. ಅವರ ಹೊಸ ವರ್ಷಾಚರಣೆ ತುಂಬಾ ವೈಶಿಷ್ಟ್ಯವಾಗಿತ್ತು ಎಂದು ಕೊತಬಾಳದ ಅರುಣೋದಯ ಕಲಾ ತಂಡದ ಸಂಸ್ಥಾಪಕ ಶಂಕ್ರಣ್ಣ ಸಂಕಣ್ಣವರ ಹೇಳಿದರು.
ಪಟ್ಟಣದ ಕೋಡಿಕೊಪ್ಪದಲ್ಲಿನ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ನರೇಗಲ್ಲದ ಎಸ್ಎವಿವಿಪಿ ಸಮಿತಿಯವರು ಏರ್ಪಡಿಸಿದ್ದ 60ನೇ ಶಿವಾನುಭವಗೋಷ್ಠಿಯಲ್ಲಿ ಅವರು ಜನಪದದಲ್ಲಿ ಹೊಸ ವರ್ಷಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜನಪದರಿಗೆ ತಮ್ಮ ಸುತ್ತಲಿನ ಸೃಷ್ಟಿಯೇ ಎಲ್ಲವೂ ಆಗಿತ್ತು. ಅವರು ಗಾಳಿ, ನೀರು, ವಾಯು, ಗಿಡಮರಗಳೆಲ್ಲವನ್ನೂ ದೇವರೆಂದು ಪೂಜಿಸುತ್ತಿದ್ದರು. ಜೊತೆಗೆ ತಮಗೆ ಅನ್ನ ನೀಡುವ ಭೂಮಿ ಮತ್ತು ಎತ್ತುಗಳಿಗೂ ಸಹ ಅವರು ದೇವರ ಸ್ಥಾನವನ್ನು ಕೊಟ್ಟು ಅವುಗಳ ಪೂಜೆಯನ್ನೇ ತಮ್ಮ ಹಬ್ಬದ ಮುಖ್ಯ ಸಂಗತಿಯನ್ನಾಗಿಸಿಕೊAಡಿದ್ದರು. ಕಲಿಯುಗವು ಇದೇ ಉಗಾದಿಯಂದು ಪ್ರಾರಂಭಗೊಂಡಿತು ಎಂದು ಅವರು ನಂಬಿದ್ದರು. ಆದ್ದರಿಂದಲೆ ಈ ಹಬ್ಬವನ್ನು ಉಗದ ಆದಿ ಅಂದರೆ ಯುಗದ ಪ್ರಾರಂಭವೆಂದು ಕರೆದರು. ಉಳಿದೆಲ್ಲ ಹಬ್ಬಗಳಿಗಿಂತ ಜನಪದರು ಈ ಹಬ್ಬಕ್ಕೆ ವಿಶೇಷ ಮಹತ್ವವನ್ನು ನೀಡಿ, ಇದನ್ನು ಹಿಂದೂಗಳಿಗೆ ಹೊಸ ವರ್ಷದ ಪ್ರಾರಂಭವೆಂದು ಆಚರಿಸುತ್ತ ಬಂದರೆಂದು ಸಂಕಣ್ಣವರ ಹೇಳಿದರು.
ಇದೇ ಸಂದರ್ಭದಲ್ಲಿ ಸಂಕಣ್ಣವರ ತಮ್ಮ ನೇತೃತ್ವದಲ್ಲಿ ಅಲ್ಲಿಕೇರಿ ಬಸವೇಶ್ವರ ಕಲಾ ತಂಡ ಮನ್ನಿಕಟ್ಟಿಯ ಕಲಾವಿದರಿಂದ ಅನೇಕ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಜಾನಪದ ಕಲಾವಿದ, ಶಿಕ್ಷಕ ಬಸನಗೌಡ ಪಾಟೀಲ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನಪ್ಪ ಮೆಣಸಗಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರೆ, ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಉಪನ್ಯಾಸಕ ಎಫ್.ಎನ್. ಹುಡೇದ ವಂದಿಸಿದರು.
ಬೇವು-ಬೆಲ್ಲ ಎರಡೂ ಎಲ್ಲರ ಜೀವನದಲ್ಲಿಯೂ ಇರುತ್ತವೆ. ಬರೀ ಬೆಲ್ಲ ಬೇಕು, ಬೇವು ಬೇಡವೆಂದರೆ ಜೀವನ ನಡೆಯುವುದಿಲ್ಲ. ಆದ್ದರಿಂದ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನ ಅತ್ಯಂತ ಸುಖಮಯವಾಗಿ ಸಾಗುತ್ತದೆ. ನಮ್ಮ ಪ್ರಕೃತಿ ಮಾತೆಯನ್ನು ನಾವುಗಳು ಕಾಪಾಡಿಕೊಂಡಾಗ ಮಾತ್ರ ನಾವು ಸುಖದಿಂದ ಬಾಳಬಹುದು. ಈಗಿರುವ ಸೆಕೆ, ಪ್ರಕೃತಿ ವಿಕೋಪಗಳನ್ನು ತಡೆಯಬೇಕೆಂದರೆ ಮೊದಲು ನಾವು ಸೃಷ್ಟಿಯ ರಕ್ಷಣೆಗೆ ಮುಂದಾಗಬೇಕು. ಹೆಚ್ಚಿನ ಗಿಡಗಳನ್ನು ನೆಡುವ ಪ್ರತಿಜ್ಞೆ ಮಾಡುವ ಮೂಲಕ ಉಗಾದಿಯನ್ನು ವಿಶಿಷ್ಠವಾಗಿ ಆಚರಿಸೋಣ ಎಂದು ಶಂಕ್ರಣ್ಣ ಸಂಕಣ್ಣವರ ಹೇಳಿದರು.