ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಬೀಡಿ, ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಟ್ಟಂತೆ. ದೇಹಕ್ಕೆ ಆಮ್ಲಜನಕದ ಕೊರತೆ ಉಂಟಾಗುವ ಮೂಲಕ ನೇರವಾಗಿ ಮೆದುಳಿಗೆ ಹಾನಿಯುಂಟುಮಾಡುತ್ತದೆ ಮತ್ತು ತಂಬಾಕು ಸೇವನೆಯಿಂದ ಪ್ರತಿಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಹೃದಯಕ್ಕೆ ಸಂಬಂದಿತ ಹಾಗೂ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಗೆ ಮನುಷ್ಯ ತುತ್ತಾಗುತ್ತಾನೆ ಎಂದು ರಂಗಚೌಕಿ ಕಲಾ ತಂಡದ ನಾಯಕ ಸರದಾರ ಬಿ.ನೀನಾಸಂ ತಿಳಿಸಿದರು.
ಪಟ್ಟಣದ ಐಬಿ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಮರಿಯಮ್ಮನಹಳ್ಳಿಯ ರಂಗಚೌಕಿ ಕಲಾ ತಂಡದ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಾಗೃತಿಯಲ್ಲಿ ಅವರು ಮಾತನಾಡಿದರು.
ಇಂತಹ ದುಶ್ಚಟಗಳಿಂದ ಹೊರಬರಲು ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕುಟುಂಬದ ಜೊತೆ ಅನ್ಯೋನ್ಯತೆಯಿಂದ ಜೀವಿಸಿ ಎನ್ನುವ ಸಂದೇಶವನ್ನು ರಂಗಚೌಕಿ ಕಲಾ ತಂಡದ ವತಿಯಿಂದ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜನರಿಗೆ ಅರಿವು ಮೂಡಿಸಿದರು.
ಕಲಾವಿದರಾದ ದಿವ್ಯಾ, ಲಕ್ಷ್ಮಿ, ಸೋಮಣ್ಣ, ಷಣ್ಮುಖ, ಬಸವರಾಜ, ಚಂದ್ರಕಾಂತ್, ಅನಿಲ್, ಮತ್ತು ಪಟ್ಟಣದ ಸಾರ್ವಜನಿಕರು ನಾಟಕವನ್ನು ವೀಕ್ಷಿಸಿದರು.