ಭಾರತ ಮತ್ತು ಬಲಿಷ್ಠ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ತನ್ನ ಮೂರನೇ ಹಾಗೂ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಇವೆರಡೂ ತಂಡಗಳು ಈಗಾಗಲೇ ಸೆಮೀಸ್ ಪ್ರವೇಶಿಸಿರುವುದರಿಂದ ಈ ಪಂದ್ಯದ ಫಲಿತಾಂಶ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ ಅಜೇಯವಾಗಿ ಸೆಮೀಸ್ ಪ್ರವೇಶಿಸುವ ಅವಕಾಶವನ್ನು ಪಂದ್ಯ ದಯಪಾಲಿಸಿದೆ. ತಲಾ 4 ಅಂಕ ಗಳಿಸಿದ್ದರೂ ರನ್ರೇಟ್ ಆಧಾರದಲ್ಲಿ ಸದ್ಯ ಕಿವೀಸ್ ಎ ಗುಂಪಿನ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಭಾರತ ಗೆದ್ದರೆ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಹೊಮ್ಮಲಿದೆ. ವಿಜೇತ ತಂಡ ಸೆಮೀಸ್ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸುವ ಅವಕಾಶವನ್ನು ಪಡೆದುಕೊಳ್ಳಲಿದೆ.
ಹಿಂದಿನ ಪಂದ್ಯಗಳ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾ ಬ್ಯಾಟರ್ಗಳು ಸ್ಪಿನ್ ಬೌಲಿಂಗ್ನಲ್ಲಿ ರನ್ ಗಳಿಸಲು ತಿಣುಕಾಡಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ಗಳಾದ ಮೆಹಿದಿ ಹಸನ್ ಮಿರಾಜ್(0/37) ಮತ್ತು ರಿಷಾದ್ ಹೊಸೈನ್ (2/38) ಅವರ ಬೌಲಿಂಗ್ ದಾಳಿ ಎದುರಿಸುವ ಸಂದರ್ಭ ಭಾರತೀಯ ಬ್ಯಾಟರ್ಗಳು ಎಚ್ಚರಿಕೆಯ ಆಟ ಪ್ರದರ್ಶಿಸಿದ್ದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ‘ಮಿಸ್ಟರಿ ಸ್ಪಿನ್ನರ್’ ಎಂದೇ ಬಿರುದಾಂಕಿತ ಲೆಗ್ ಸ್ಪಿನ್ನರ್ ಅಬ್ರಾರ್ ಅಹಮದ್ (1/28) ಅವರ ಎಸೆತಗಳನ್ನು ಎದುರಿಸುವಾಗಲೂ ಅದೇ ಎಚ್ಚರಿಕೆ ಮತ್ತು ಸುರಕ್ಷಿತ ಆಟಕ್ಕೆ ರೋಹಿತ್ ಪಡೆ ಮೊರೆ ಹೋಗಿತ್ತು. ಆ ದೃಷ್ಟಿಯಿಂದ ನೋಡುವುದಾದರೆ ನ್ಯೂಜಿಲೆಂಡ್ನಿಂದ ಭಾರತ ಕಠಿಣ ಸವಾಲನ್ನು ನಿರೀಕ್ಷಿಸಬಹುದಾಗಿದೆ.