ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ರಥೋತ್ಸವ ಎಪ್ರಿಲ್ 9ರಂದು ಸಂಜೆ 5ಕ್ಕೆ ಜರುಗಲಿದೆ.
ಡೋಣಿಯ ನಂದಿವೇರಿ ಮಠದ ಶಿವಕುಮಾರಸ್ವಾಮಿಗಳು, ಹರ್ಲಾಪೂರದ ಡಾ. ಕೊಟ್ಟೂರೇಶ್ವರ ಶ್ರೀಗಳು, ಗ್ರಾಮದ ಸಿದ್ಧಲಿಂಗೇಶ್ವರ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ರಥವು ಸಾಗಲಿದೆ. ಕೋಟೆ ವೀರಭದ್ರೇಶ್ವರ ನಂದಿಕೋಲ ಸಮ್ಮಾಳ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವವು.
ಸಂಜೆ 7ಕ್ಕೆ ವೇ.ಮೂ ಮಹಾಂತಯ್ಯ ಬದ್ನಿಮಠ ಅವರಿಂದ ವೀರಭದ್ರೇಶ್ವರ ಪ್ರವಚನ ನಡೆಯುವುದು. ಇದಕ್ಕೂ ಪೂರ್ವ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ನಡೆಯುವುದು. ಎಪ್ರಿಲ್ 10ರಂದು ಬೆಳಿಗ್ಗೆ 7ಕ್ಕೆ ಪ್ಯಾಟಿ ಹನುಮಂತ ದೇವರ ದೇಗುಲದಿಂದ ಗುಗ್ಗಳೋತ್ಸವ ಕಾರ್ಯಕ್ರಮವು ಪ್ರಮುಖ ಬೀದಿಯಲ್ಲಿ ಹಾಯ್ದು ದೇವಸ್ಥಾನನ್ನು ತಲುಪಿ ಅಗ್ನಿ ಹಾಯುವ ಕಾರ್ಯಕ್ರಮ ಜರುಗುವುದು. ಸಂಜೆ 5ಕ್ಕೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.