ವಿಜಯಸಾಕ್ಷಿ ಸುದ್ದಿ, ಗದಗ: ಮಠಗಳು ಭಾವೈಕ್ಯತೆ, ಸಹಕಾರಕ್ಕೆ ಕೇಂದ್ರ ಶಕ್ತಿಯಾಗಿರಬೇಕು ಎಂದು ನಂಬಿದ್ದ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಕಾರಣದಿಂದ ಗದಗ ಜಿಲ್ಲೆ ಭಾವೈಕ್ಯತೆಯ ಬೀಡಾಗಿದೆ ಎಂದು ಶಾಸಕರು ಹಾಗೂ ಮಾಜಿ ಸಚಿವರಾದ ಸಿ.ಸಿ. ಪಾಟೀಲ ನುಡಿದರು.
ಅವರು ನಗರದ ತೋಂಟದಾರ್ಯ ಮಠದ 2025ನೇ ಜಾತ್ರಾ ಮಹೋತ್ಸವದ ಮಂಗಲೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಒಂದು ವಿಶ್ವವಿದ್ಯಾಲಯಕ್ಕಿಂತ ಹೆಚ್ಚು ಪುಸ್ತಕಗಳನ್ನು ಶ್ರೀಮಠದ ಮೂಲಕ ಪ್ರಕಟಿಸಿದ ಸಿದ್ಧಲಿಂಗ ಶ್ರೀಗಳು ನಡೆದಾಡುವ ವಿಶ್ವವಿದ್ಯಾಲಯದಂತಿದ್ದರು. ಜಾತ್ರೆಗಳು ಮನರಂಜನೆಗೆ ಸೀಮಿತವಾಗದೇ ಜನೋತ್ಸವವಾಗಬೇಕು ಎನ್ನುತ್ತಿದ್ದ ಶ್ರೀಗಳು ಅದರಂತೆ ತೋಂಟದಾರ್ಯ ಮಠದ ಜಾತ್ರೆಯನ್ನು ಇತರೆ ಜಾತ್ರೆಗಳಿಗೆ ಮಾದರಿಯನ್ನಾಗಿಸಿದರು. ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಠದ ಭವ್ಯ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ನರಗುಂದದ ತೋಂಟದಾರ್ಯ ಶಾಖಾಮಠದಲ್ಲಿ ನಡೆಯುತ್ತಿರುವ ಜಾತ್ರೆಗೆ ನನ್ನನ್ನು ಅಧ್ಯಕ್ಷನನ್ನಾಗಿಸಿದ್ದು ನನ್ನ ಅದೃಷ್ಟ ಎಂದರು.
ಧಾರವಾಡದ ಐ.ಐ.ಟಿ ಡೀನ್, ವಿಜ್ಞಾನಿಗಳಾದ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಆಧುನಿಕ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರವೂ ತೀವ್ರಗತಿಯಲ್ಲಿ ನವೀಕರಣ ಹೊಂದುತ್ತಿದ್ದು, ತಂತ್ರಜ್ಞಾನ ಬೆಳೆಯುತ್ತಿರುವ ವೇಗವನ್ನು ಊಹಿಸಲು ಸಹ ಸಾಧ್ಯವಿಲ್ಲ. ಎಐ (ಕೃತಕ ಬುದ್ಧಿಮತ್ತೆ) ಮಾನವನ ಬುದ್ಧಿಶಕ್ತಿಗೂ ಮೀರಿ ಕೆಲಸಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಅನೇಕ ವೃತ್ತಿಗಳು ಅರ್ಥ ಕಳೆದುಕೊಳ್ಳುತ್ತವೆ. ಆದ್ದರಿಂದ ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ಎಷ್ಟು ಅಪ್ಡೇಟೆಡ್ ಆಗಿದೆ ಎಂದು ಖಾತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದರು.
ಮುರುಘಾಮಠ ಧಾರವಾಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ರುದ್ನೂರು ತೋಂಟದಾರ್ಯ ಶಾಖಾಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ರಬಕವಿ ಗುರುದೇವ ಬ್ರಹ್ಮಾನಂದಾಶ್ರಮದ ಗುರುಸಿದ್ಧ ಮಹಾಸ್ವಾಮಿಗಳು, ಅಗಡಿ-ಗುತ್ತಲದ ಪ್ರಭುಸ್ವಾಮಿಮಠದ ಗುರುಸಿದ್ಧ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು. ಹಿಂದೂಸ್ತಾನಿ ಗಾಯಕಿ ವಿದುಷಿ ರೇಣುಕಾ ನಾಕೋಡ ಇವರಿಂದ ವಚನ ಸಂಗೀತ ಜರುಗಿತು.
ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಸ್ವಾಗತಿಸಿದರು. ತೋಂಟದಾರ್ಯ ಮಠದ ಜಾತ್ರಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶ್ರೀಮಠದ ಸದ್ಭಕ್ತರು ಹಾಜರಿದ್ದರು.
ನಾಗನೂರು-ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕೋಮು ಸೌಹಾರ್ದತೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದವರು. ಅನೇಕ ಪ್ರತಿಭಾವಂತರನ್ನು ಪ್ರೋತ್ಸಾಹಿಸಿದ ಅವರು ತೋಂಟದಾರ್ಯ ಮಠದ ವೈಭವವನ್ನು ಮತ್ತೆ ಮರಳಿ ತಂದರು. ನಮ್ಮ ಗುರುಗಳಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಿದ್ಧಲಿಂಗ ಶ್ರೀಗಳ ಪ್ರತಿರೂಪವಾಗಿದ್ದಾರೆ ಎಂದರು.