ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತವಿಂದು ಯೋಗ ಗುರುವಾಗಿ ಪ್ರಖ್ಯಾತಿ ಪಡೆಯುವಲ್ಲಿ ಯೋಗವನ್ನು ವೈಜ್ಞಾನಿಕವಾಗಿ ಜಗತ್ತಿಗೆ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇ ಕಾರಣ. ಯೋಗದ ಮಹತ್ವ, ಅವಶ್ಯಕತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಯೋಗ ಗುರುಗಳು, ಸಾಧಕರು, ಶಿಕ್ಷಕರು, ತರಬೇತುದಾರರ ಸಂಖ್ಯೆ ಹೆಚ್ಚುತ್ತಲೇ ಇದೆ.
ಬಹುತೇಕರು ಯೋಗ ತರಬೇತಿ ಶಿಬಿರ ಮತ್ತು ನಿತ್ಯ ಅಭ್ಯಾಸದಿಂದ ಪರಿಣಿತ ಹೊಂದುತ್ತಾರೆ. ಆದರೆ ಯೋಗ ಶಿಕ್ಷಣದಲ್ಲಿಯೇ ವಿಶೇಷವಾದ ಬಿಎನ್ವೈಎಸ್ (ಬ್ಯಾಚ್ಯಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಅಂದರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಬಗೆಗಿನ 6 ವರ್ಷಗಳ ಅಧ್ಯಯನ, ಎಂಡಿ ಪದವಿಯನ್ನು ಪಡೆದ ಲಕ್ಷ್ಮೇಶ್ವರದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ತಜ್ಞವೈದ್ಯರಾದ ಡಾ. ಶೃತಿ ಹೂವಿನ ಜಿಲ್ಲೆಯ ಯೋಗ ಸಾಧಕರಲ್ಲಿ ಅಗ್ರಪಂಕ್ತಿಗೆ ಸೇರುತ್ತಾರೆ.
ಸದ್ಯ ಇವರು ಲಕ್ಷ್ಮೇಶ್ವರದ ಅಗಡಿ ಸನ್ರೈಸ್ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕತ್ಸಾ ತಜ್ಞರಾಗಿ ಮತ್ತು ಪಟ್ಟಣ ಸೇರಿ ಅನೇಕ ಕಡೆ ಉಚಿತ ಯೋಗ ಶಿಕ್ಷಣ, ತರಬೇತಿ ಕೊಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
2016ರಲ್ಲಿ ಮೈಸೂರಿನ ಸರ್ಕಾರಿ ನೇಚರ್ ಕ್ಯೂರ್ ಅಂಡ್ ಯೋಗ ಮೆಡಿಕಲ್ ಕಾಲೇಜಿನಲ್ಲಿ ಬಿಎನ್ವೈಎಸ್ ಮತ್ತು 2020ರಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಕ್ಲಿನಿಕಲ್ ನ್ಯಾಚುರೋಪಯಲ್ಲಿ ಎಂಡಿ ಪದವಿ ಪಡೆದಿದ್ದಾರೆ.
ಯೋಗಾಭ್ಯಾಸ, ಪ್ರಕೃತಿ ಚಿಕಿತ್ಸೆಯಿಂದ ಅನೇಕ, ದೀರ್ಘಕಾಲೀನ ಮತ್ತು ಇಂಗ್ಲೀಷ್ ಔಷಧಿಯಿಂದ ಗುಣಪಡಿಸಲಾಗದ ರೋಗಗಳನ್ನು ಗುಣಪಡಿಸಬಹುದು ಎನ್ನುವದನ್ನು ವೈದ್ಯಕೀಯ ಶಿಕ್ಷಣದಿಂದ ಕಲಿತ ಡಾ. ಶೃತಿ ಹೂವಿನ ಇಂದು ಸಾವಿರಾರು ರೋಗಿಗಳಿಗೆ ಹೊಸ ಜೀವನ, ಆರೋಗ್ಯಕರ ಜೀವನ, ಸಮಾಜಕ್ಕಾಗಿ ಉಚಿತ ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ ಶಿಕ್ಷಣ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಡಾ. ಶೃತಿ ಹೂವಿನ ಅವರದ್ದು ವೈದ್ಯ ವೃತ್ತಿಯ ಕುಟುಂಬ. ತಂದೆ, ತಾತ, ಚಿಕ್ಕಪ್ಪ, ದೊಡ್ಡಪ್ಪ, ಅಕ್ಕಂದಿರು, ಮಾವಂದಿರು ಹೀಗೆ ಎಲ್ಲರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಯೋಗ ಶಿಬಿರದಲ್ಲಿ ಬೊಜ್ಜು, ಬಿಪಿ, ಶುಗರ್, ಕೀಲು ನೋವು, ಬೆನ್ನು, ತಲೆ ನೋವು, ಆತಂಕ, ನಿದ್ರಾಹೀನತೆ, ಮಾನಸಿಕತೆ ನಿವಾರಣೆಯ ಬಗ್ಗೆ ಯೋಗ ಶಿಕ್ಷಣ ಕೊಡುತ್ತಾರೆ. ಸ್ತ್ರೀಯರ ಆರೋಗ್ಯ ಸಮಸ್ಯೆ, ಮಕ್ಕಳು, ಹಿರಿಯರ ಆರೋಗ್ಯ ಚಿಕಿತ್ಸೆಗೆ ಬರುವವರಿಗೆ ಪ್ರತಿದಿನ ಮುದ್ರೆ, ಯೋಗ, ಪ್ರಾಣಾಯಾಮ ಮಾಡುವ ವಿಧಾನ ತಿಳಿಸಿ ನಿತ್ಯ ಬದುಕಿನಲ್ಲಿ ಯೋಗ ರೂಢಿಸಿಕೊಳ್ಳುವಂತೆ ತಿಳಿಸುತ್ತಾರೆ.
ಪ್ರಕೃತಿ ನಮಗೆ ನೀಡಿದ ಅನೇಕ ಕೊಡುಗೆಗಗಳಲ್ಲಿ ಯೋಗವೂ ಒಂದು. ಯೋಗ ನಮಗೆ ನಾವೇ ಕಂಡುಕೊಳ್ಳುವ ಚಿಕಿತ್ಸೆ ಮತ್ತು ಅರೋಗ್ಯದ ಕಣಜ. ಒತ್ತಡಮುಕ್ತ ಮತ್ತು ಶಾಂತಿಯುತ ಬದುಕಿಗಾಗಿ ಯೋಗ-ಪ್ರಾಣಾಯಾಮಗಳು ಸಾಧನವಾಗಿವೆ. ಯೋಗ ಎಲ್ಲ ವಯೋಮಾನದವರ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯಕ್ಕೂ ಮದ್ದಾಗಿದೆ. ಯೋಗ ನಿತ್ಯದ ಬದುಕಿನ ಅಂಗವಾಗಬೇಕು. ಕೇವಲ ಜೂ.21ಕ್ಕೆ ಯೋಗ ದಿನ ಸೀಮಿತವಾಗದೇ ಅದು ನಿತ್ಯನೂತನವಾಗಲಿ.
– ಡಾ. ಶೃತಿ ಹೂವಿನ.
ಯೋಗ-ಪ್ರಕೃತಿ ಚಿಕಿತ್ಸಾ ತಜ್ಞೆ.