ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾವಯವ ಕೃಷಿ ರೈತ ಸಮುದಾಯಕ್ಕೆ ಸಂಜೀವಿನಿಯಾಗಿದ್ದು, ರೈತರು ರಾಸಾಯನಿಕ ಕೃಷಿಯಿಂದ ದೂರ ಸರಿದು ಸಾವಯವ, ಸಾಂಪ್ರದಾಯಿಕ ಕೃಷಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಲಕ್ಷ್ಮೇಶ್ವರದ ಸಾವಯವ ಪ್ರಗತಿ ರೈತ ಬಸವರಾಜ ಬೆಂಡಿಗೇರಿ ಹೇಳಿದರು.
ಯಳವತ್ತಿ ಗ್ರಾಮದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕೃಷಿಗೋಷ್ಠಿಯಲ್ಲಿ ಸಾವಯವ ಕೃಷಿ ಮಹತ್ವ ಕುರಿತು ಅವರು ಮಾತನಾಡಿದರು.
ಹಸಿರು ಕ್ರಾಂತಿಯ ನಂತರ ನಮ್ಮ ಪುರಾತನ ಕೃಷಿ ಪದ್ಧತಿಗೆ ಹೊಡೆತ ಬಿದ್ದಿದೆ. ರಾಸಾಯನಿಕ ಗೊಬ್ಬರ ಇಲ್ಲದೆ ಇಂದು ಕೃಷಿ ಇಲ್ಲ ಎನ್ನುವಷ್ಟರಮಟ್ಟಿಗೆ ರೈತರು ಹೊಂದಿಕೊಂಡುಬಿಟ್ಟಿದ್ದಾರೆ. ಆದರೆ ನಿರಂತರವಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಬಿತ್ತನೆ ಭೂಮಿ ಬರಡಾಗುವ ಪರಿಸ್ಥಿತಿ ಬಂದಿದೆ. ಬಿತ್ತನೆ ಭೂಮಿಯೇ ಹಾಳಾದರೆ ಮುಂದೆ ಕೃಷಿಗೆ ದೊಡ್ಡ ಪೆಟ್ಟು ಬೀಳುವ ಅಪಾಯ ಇದೆ. ಕಾರಣ ಈಗಿನಿಂದಲೇ ರೈತರು ಸಾವಯವ ಕೃಷಿಗೆ ಮಹತ್ವ ನೀಡಬೇಕು ಎಂದು ತಿಳಿಸಿದರು.
ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಮಹಿಳಾ ಚಿಂತಕಿ ಮಾಲಾದೇವಿ ದಂಧರಗಿ, ಇಂದಿಗೂ ಸಮಾಜದಲ್ಲಿ ಮಹಿಳೆಯರ ಶೋಷಣೆ ತಪ್ಪಿಲ್ಲ. ಹೆಸರಿಗಷ್ಟೇ ಸಮಾನತೆ ಎನ್ನುತ್ತಾರೆ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಈಗಲೂ ಹೆಣ್ಣಿನ ಶೋಷಣೆ, ನಿರ್ಲಕ್ಷ್ಯ ನಡೆದೇ ಇದೆ. ಅದರಲ್ಲೂ ರಾಜಕೀಯ ರಂಗದಲ್ಲಂತೂ ಶೋಷಣೆ ಇನ್ನಷ್ಟು ಹೆಚ್ಚಾಗಿದೆ. ಮಹಿಳೆ ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಪ್ರಗತಿ ಸಾಧಿಸಬಲ್ಲಳು. ಆದರೆ ಅದಕ್ಕೆ ಸಮಾಜದ ಪ್ರೋತ್ಸಾಹ, ಸಹಕಾರ ಅಗತ್ಯ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಸಾಹಿತ್ಯದ ಅಗತ್ಯತೆ ಕುರಿತು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯವೂ ಬಹಳ ಮಹತ್ವದ್ದು. 20ನೇ ಶತಮಾನದ ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದ ಜನಕರು. ಮಕ್ಕಳ ಕವಿಗಳು, ಬರಹಗಾರರು ಸ್ವತಃ ಮಕ್ಕಳೇ ಆದಾಗ ಮಾತ್ರ ಅವರಿಂದ ಉತ್ತಮ ಮಕ್ಕಳ ಸಾಹಿತ್ಯ ರಚನೆ ಆಗಲು ಸಾಧ್ಯ. ದರ್ಗಸಿಂಹನ ಪಂಚತಂತ್ರ ಕಥೆಗಳು ವಿಶ್ವದ ಶ್ರೇಷ್ಠ ಮಕ್ಕಳ ಸಾಹಿತ್ಯದ ರಚನೆಯಾಗಿದೆ. ಇಂಗ್ಲೀಷ್ನ ವ್ಯಾಮೋಹದಿಂದಾಗಿ ಇಂದು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮಕ್ಕಳು ಕನಿಷ್ಠ ಎಸ್ಎಸ್ಎಲ್ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ವ್ಯವಸ್ಥೆ ಬರಬೇಕು ಎಂದು ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಲಲಿತಕ್ಕ ಕೆರಿಮನಿ, ಪರ್ಣಾಜಿ ಖರಾಟೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬಿ.ಎಸ್. ಬಾಳೇಶ್ವರಮಠ ಆಶಯ ನುಡಿ ಹೇಳಿದರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಉದ್ಘಾಟನಾ ನುಡಿಗಳನ್ನಾಡಿದರು.
ಈ ವೇಳೆ ಫಕ್ಕೀರೇಶ ಮ್ಯಾಟಣ್ಣವರ, ಕೋಟೆಪ್ಪ ರ್ದಿ, ಶಕುಂತಲಾ ಹೊರಟ್ಟಿ, ಲತಾ ತಟ್ಟಿ, ಶಕುಂತಲಾ ಅಳಗವಾಡಿ, ಸಿದ್ಧಲಿಂಗೇಶ ರಗಟಿ, ಡಿ.ವೈ. ಹುನಗುಂದ ಮತ್ತಿತರರು ಇದ್ದರು. ಶೇಖರ ಚಿಕ್ಕಣ್ಣವರ, ಆರ್.ಎಫ್. ಕಪ್ಪತ್ತನವರ, ನಾಗರಾಜ ಶಿಗ್ಲಿ, ಫಕ್ಕಿರೇಶ ಚಕಾರದ ನಿರೂಪಿಸಿದರು.
ಡಿಡಿಪಿಐ ಆರ್.ಎಸ್. ಬುರುಡಿ ಮಾತನಾಡಿ, ಇಂದು ಸಾವಯವ ಕೃಷಿಯ ಅಗತ್ಯ ಇದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯನ್ನು ರೈತರು ಕಡಿಮೆ ಮಾಡಬೇಕು. ಸಾವಯವ ಕೃಷಿಯಿಂದ ವಿಷಮುಕ್ತ ಆಹಾರ ಬೆಳೆದರೆ ದೇಶದ ಜನರ ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ. ಕೃಷಿ ಭೂಮಿ ಸಕಲ ಜೀವರಾಶಿಗಳ ಬದುಕಿನ ಆಧಾರವಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗೆಗಿನ ಚಿಂತನೆ ಅಗತ್ಯ ಎಂದು ತಿಳಿಸಿದರು.



