ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತ್ಯಾಗ-ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ರವಿವಾರ ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂದೂ-ಮುಸ್ಲಿಂ ಬಾಂಧವರು ಸಂಪ್ರದಾಯಬದ್ಧವಾಗಿ ಆಚರಿಸಿದರು. ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಪಟ್ಟಣದ ಸುಮಾರು 15 ಮಸೀದಿಗಳ ಪಾಂಜಾಗಳು ಸೇರಿ ಅಲ್ಲಿಂದ ಮೆರವಣಿಗೆಯಲ್ಲಿ ಬಜಾರ್ ರಸ್ತೆಯ ಮೂಲಕ ಸಾಗಿ ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂದೆ ಹಾಯ್ದು ಶಿಗ್ಲಿ ಕ್ರಾಸ್ವರೆಗೆ ಸಾಗಿ ಚೋಟೆ ಲಂಕಾಪತಿ ಮಸೀದಿಗೆ ಭೇಟಿ ನೀಡಿ ಮತ್ತೆ ತಮ್ಮ ತಮ್ಮ ಮೂಲ ಸ್ಥಳಗಳಿಗೆ ಸಾಗುವುದು ವಾಡಿಕೆಯಾಗಿದ್ದು, ಸಂಜೆ ಮತ್ತೆ ಎಲ್ಲ ಪಾಂಜಾಗಳು ಸೇರಿ ಹೊಳೆಗೆ ಹೋಗುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ.
ಪಟ್ಟಣದಲ್ಲಿನ ಮಸೀದಿ, 15ಕ್ಕೂ ಹೆಚ್ಚು ಮೊಹಲ್ಲಾಗಳಲ್ಲಿ ಸ್ಥಾಪಿಸಿದ್ದ ಅಲೈ ದೇವರು ಮತ್ತು ಡೋಲಿ ಹಾಗೂ ಹಸೇನ, ಹುಸೇನ ಮತ್ತು ಬೀಬಿ ಪಾತೀಮಾ ಪ್ರತೀಕವಾದ ಪಾಂಜಾಗಳ (ದೇವರು) ಭವ್ಯವಾದ ಮೆರವಣಿಗೆ ನಡೆಸಲಾಯಿತು. ನಂತರ ಅಗೀನ ಹಾಯುವುದು, ಶಸ್ತ್ರ ಸೇವೆ, ಬಾರಕೋಲು ಸೇವೆಯ ಮೂಲಕ ಭಕ್ತಿ ಪ್ರದರ್ಶಿಸಲಾಯಿತು. ಮುಸ್ಲಿಮರೇ ಇಲ್ಲದ ತಾಲೂಕಿನ ಒಡೆಯರ ಮಲ್ಲಾಪುರದಲ್ಲಿ ಹಿಂದೂಗಳೇ ಮೊಹರಂ ಹಬ್ಬ ಆಚರಿಸಿದರು.
ಮೆರವಣಿಗೆಯಲ್ಲಿ ದೂದನಾನಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ್ ಕಣಕೆ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಎಸ್.ಕೆ. ಹವಾಲ್ದಾರ, ರಾಜೀವ ಕುಂಬಿ, ದಾದಾಪೀರ ಮುಚ್ಚಾಲೆ, ದಾದಾಪೀರ ತಂಬಾಕದ, ಎನ್.ಎಂ. ಗದಗ, ಕಿರಣ ನವಲೆ, ಮಹೇಶ ಹೊಗೆಸೊಪ್ಪಿನ್, ಇಸ್ಮಾಯಿಲ್ ಆಡೂರ, ನಾರಾಯಣಸಾ ಪವಾರ, ಶರಣು ಗೋಡಿ, ಬಸವಣ್ಣೆಪ್ಪ ನಂದೆಣ್ಣವರ, ಟಾಕಪ್ಪ ಸಾತಪೂತೆ, ಚಂದ್ರಣ್ಣ ಹೂಗಾರ, ಸಂತೋಷ ಗದಗ, ಅಣಜಾಣವರ, ದಾದಾಪೀರ ಕಾರಡಗಿ, ಫಯಾಜ್ ಅತ್ತಿಗೇರಿ, ಹಬೀಬುಲ್ಲಾ ಕರೀಮಖಾನವರ, ಖಲಂದರ ಸೂರಣಗಿ, ಜಿಲಾನಿ ಸೂರಣಗಿ, ಪಿಎಸ್ಐ ನಾಗರಾಜ ಗಡದ, ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ.ರಾಥೋಡ ಸೇರಿದಂತೆ ಹಿಂದೂ-ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.



