ತುಮಕೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭ ಆದ ಮೇಲೆ ಸರ್ಕಾರಿ ಬಸ್ಸುಗಳಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ.
ಆದರೆ ಯಾವ ಬಸ್ ನೋಡಿದರೂ ತುಂಬಿ ತುಳುಕುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಚಲಿಸುವ ಬಸ್ ಕಿಟಕಿಯಲ್ಲಿ ಬ್ಯಾಗ್ ಇಡಲು ಹೋಗಿ ವಿದ್ಯಾರ್ಥಿನಿ ಕಾಲು ಚಕ್ರಕ್ಕೆ ಸಿಲುಕಿರುವ ಘಟನೆ ನಗರದ ದೇವರಾಜ ಅರಸು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜರುಗಿದೆ. ಬಸ್ ಪ್ಲಾಟ್ಫಾರ್ಮ್ಗೆ ಬರುವ ಮೊದಲೇ ಕಿಟಕಿಯ ಮೂಲಕ ಸೀಟ್ ಹಿಡಿಯಲು ಹೋದ ವಿದ್ಯಾರ್ಥಿನಿ, ಬಸ್ನ ಹಿಂದಿನ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ.
ತುಮಕೂರು-ಪಾವಗಡ ಮಾರ್ಗದ ಬಸ್ ಹತ್ತಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಏಕಾಏಕಿ ಮುಗಿಬಿದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಬಸ್ ನಿಲ್ಲುವ ಮೊದಲೇ ಕಿಟಕಿಯ ಒಳಗೆ ಬ್ಯಾಗ್ ಇಟ್ಟು ಸೀಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಾಳೆ. ಚಲಿಸುತ್ತಿದ್ದ ಬಸ್ನ ವೇಗಕ್ಕೆ ವಿದ್ಯಾರ್ಥಿನಿಯ ನಿಯಂತ್ರಣ ತಪ್ಪಿ, ಆಕೆಯ ಕಾಲು ಬಸ್ನ ಹಿಂದಿನ ಚಕ್ರದಡಿಗೆ ಸಿಲುಕಿದೆ.
ಇದರಿಂದ ಆಕೆಯ ಕಾಲು ಸಂಪೂರ್ಣವಾಗಿ ಜಖಂಗೊಂಡಿದೆ. ಈ ಆಘಾತಕಾರಿ ದೃಶ್ಯವು ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ. ಗಾಯಾಳು ವಿದ್ಯಾರ್ಥಿನಿಯನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ತುಮಕೂರು ನಗರ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



