ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಲಿಪಿಕ ವರ್ಗದವರು ಬಡ್ತಿ ಪಡೆಯಲು ನಕಲಿ ಡಿಪ್ಲೊಮಾ ಪ್ರಮಾಣಪತ್ರ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನ ಪರಿಷಷತ್’ನಲ್ಲಿ ಶಾಸಕ ಟಿ.ಎ.ಶರವಣ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇಲ್ಲಿ ಸಾರಿಗೆ ಇಲಾಖೆ ಮಾತ್ರವಲ್ಲ. ತಾಂತ್ರಿಕ ಶಿಕ್ಷಣ ಇಲಾಖೆಯೂ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಇದರಿಂದ ನಿವೃತ್ತ ನ್ಯಾಯಾಧೀಶರಾದ ನಾರಾಯಣ ಅವರನ್ನು ಈಗಾಗಲೇ ನೇಮಿಸಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕ್ರಮಕ್ಕೆ ಒತ್ತಾಯ
ನಂತರ ಮಾತನಾಡಿದ ಶಾಸಕ ಶರವಣ ಅವರು, ಕೆಸಿಎಸ್ ಆರ್ ಕಾಯ್ದೆಯಂತೆ ನಕಲಿ ಪ್ರಮಾಣಪತ್ರ ನೀಡಿದವರ ಮೇಲೂ ಕ್ರಮವಾಗಬೇಕು. ಮೈಸೂರು, ಬೆಳಗಾವಿಗಳಲ್ಲಿ ಪರೀಕ್ಷೆ ಬರೆದವರು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿಗೆ ಬಂದು ಹೇಗೆ ಪರೀಕ್ಷೆ ಬರೆಯಲು ಸಾಧ್ಯ? ಇವರಿಗೆ ಹೇಗೆ ಪ್ರಮಾಣ ಪತ್ರವನ್ನು ಕೊಡಲಾಯಿತು? ಇದರ ಬಗ್ಗೆಯೂ ತನಿಖೆಯಾಗಿ ಕ್ರಮ ಆಗಬೇಕು.
ಯಾಕೆಂದರೆ ಇಂದು ಉದ್ಯೋಗದ ಸಮಸ್ಯೆಯಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಸಾಕಷ್ಟು ಜನ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಅಧಿಕಾರಿಗಳ ನಡೆಗೆ ಆಕ್ಷೇಪ
ಶಾಸಕ ಟಿ.ಎ.ಶರವಣ ಮಾತನಾಡಿ, ಸಾರಿಗೆ ಇಲಾಖೆಯಲ್ಲಿ ಲಿಪಿಕ ನೌಕರರುಗಳು ಡಿಪ್ಲೋಮಾ ನಕಲಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದೆ. ಆಗ ಸಂಪೂರ್ಣ ವರದಿ ಕೊಡಿ ಲೋಕಾಯುಕ್ತ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದರು. ಅದರಂತೆ 2025 ರ ಡಿಸೆಂಬರ್ 15 ರಂದೇ ಸಚಿವರಿಗೆ ಟಿಪ್ಪಣಿಯೊಂದಿಗೆ ಸಂಪೂರ್ಣ ದಾಖಲಾತಿ ನೀಡಿದ್ದೆ.
ಆದರೆ, ಮೂರು ತಿಂಗಳು ಕಳೆದರೂ ನೌಕರರ ಮೇಲೆ ಯಾವುದೇ ತನಿಖೆಯಾಗಲಿ , ಕ್ರಮವಾಗಲಿ ಆಗಿಲ್ಲ. ಈಗ ಸದನದಲ್ಲಿ ಮಾತನಾಡಬೇಕು ಎಂದು ಫೆ.23ಕ್ಕೆ ಪ್ರಶ್ನೆ ಕೊಟ್ಟ ಒಂದು ವಾರಗಳ ನಂತರ ಅಕ್ರಮ ಎಸಗಿದವರಿಗೆ ನೋಟಿಸ್ ಕೊಟ್ಟಿದ್ದಾರೆ. 15 ದಿನದಲ್ಲಿ ಉತ್ತರ ಕೊಡಿ ಎಂದು ನೆಪಕ್ಕೆ ಹೇಳಿದ್ದಾರೆ.
ಸಚಿವರ ಬಗ್ಗೆ ಗೌರವ ಇದೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಲಾಖೆಯ ಅಧಿಕಾರಿಗಳು ಸಚಿವರನ್ನೂ ಯಾವ ರೀತಿ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂಬುದನ್ನು ಗಮನಕ್ಕೆ ತರ ಬಯಸುತ್ತೇನೆ ಎಂದರು.
ಎಷ್ಟು ಜನರಿಂದ ಪ್ರಮಾಣಪತ್ರ.?
ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ಮಾಹಿತಿ ನೀಡಿ, ಸಾರಿಗೆ ಇಲಾಖೆಯ ಲಿಪಿಕ ವರ್ಗದವರಿಗೆ ಸಿ ಗ್ರೂಪ್ ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಬಡ್ತಿ ಪಡೆಯಲು ಡಿಪ್ಲೊಮಾ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಹೆಚ್ಚಿನ ಓದಿಗಾಗಿ ಇಲಾಖೆಯಲ್ಲಿ ಶೇ. 10ರಷ್ಟು ನೌಕರರಿಗೆ ಅವಕಾಶ ಮಾಡಿಕೊಟ್ಟು 12-10-22 ರಂದು ಆದೇಶ ಮಾಡಲಾಯಿತು. ಅದರಂತೆ 22-23 ನೇ ಸಾಲಿನಲ್ಲಿ 17 ಜನರಿಗೆ 23-24 ರಲ್ಲಿ 24 ನೌಕರರಿಗೆ, 24-25 ರಲ್ಲಿ 15 ನೌಕರರಿಗೆ ಉನ್ನತ ಶಿಕ್ಷಣ ಓದಲು ಅನುಮತಿ ನೀಡಲಾಗಿದೆ.
ಅದರಲ್ಲಿ ಇಬ್ಬರು ಸಾರಿಗೆ ಇಲಾಖೆಯವರಲ್ಲ. ಇನ್ನಿಬ್ಬರು ನಿಯಮಿತ ರಜೆ ಪಡೆದು ತೆರಳಿದ್ದಾರೆ. ಆದರೆ ಉಳಿದವರು ಪ್ರಮಾಣಪತ್ರಗಳ ಬಗ್ಗೆ ಅನುಮಾನವಿದೆ. ಇದರಿಂದ 9-5-25 ಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ದೇಶಕರಿಗೆ ಸಾರಿಗೆ ಇಲಾಖೆ ಆಯುಕ್ತರು ಪತ್ರ ಬರೆದರು. ನಕಲಿ ಪ್ರಮಾಣಪತ್ರ ಪಡೆಯುತ್ತಿರುವ ಬಗ್ಗೆ ಕಾರಣ ಕೇಳಿದರು. 29-11- 25 ಕ್ಕೆ ಆಯುಕ್ತರು ಮತ್ತೆ ಪತ್ರ ಬರೆಯುತ್ತಾರೆ. ಅವರಿಂದ ಸರಿಯಾದ ಮಾಹಿತಿ ಸಿಗುವುದಿಲ್ಲ. ಆಯುಕ್ತರು 3-3-26 ರಂದು ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ ಎಂದರು.



