ಬೆಂಗಳೂರು: 85 ವರ್ಷದ ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿ. ಅನಂತ್ ಸುಬ್ಬರಾವ್ ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಅವರು ವಿಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಸ್ನಾನ ಮಾಡಿದ ಬಳಿಕ ಉಸಿರಾಟದ ತೊಂದರೆ ಕಾಣಿಸಿಕೊಂಡು, ಆಸ್ಪತ್ರೆಗೆ ತಲುಪುವ ಮಾರ್ಗದಲ್ಲಿಯೇ ಕೊನೆಯುಸಿರೆಳೆದರು. ಅನಂತ್ ಸುಬ್ಬರಾವ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರಾಗಿದ್ದರು. ಅನಂತ್ ಸುಬ್ಬರಾವ್, ನಾಲ್ಕು ದಶಕಗಳ ಕಾಲ ಕಾರ್ಮಿಕ ಹೋರಾಟ, ಚಳವಳಿಗಳನ್ನು ಸಂಘಟಿಸಿ ನಡೆಸಿದವರಾಗಿದ್ದು, ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದರು. ಇದೀಗ ಅವರ ನಿಧನದಿಂದ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.
ಇನ್ನೂ ವಿವಿಧ ಬೇಡಿಕೆ ಈಡೇರಿಸುವಂತೆ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದರು. ಇದರಿಂದ ನಾಳೆ ಬಸ್ ಸಂಚಾರ ಇರುತ್ತಾ ಇಲ್ವಾ ಎಂಬ ಗೊಂದಲ ಪ್ರಯಾಣಿಕರಲ್ಲಿ ಮೂಡಿಸಿತ್ತು. ಆದ್ರೆ, ಸಾರಿಗೆ ನೌಕರರ ಸಂಘದ ಮುಖಂಡ ಸಾವನ್ನಪ್ಪಿರುವುದರಿಂದ ಬೆಂಗಳೂರು ಚಲೋ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದೆ.



