ಚಿಕ್ಕಮಗಳೂರು:- ನಕ್ಸಲ್ ಮುಕ್ತ ಕರ್ನಾಟಕದ ಘೋಷಣೆಯ ಭಾಗವಾಗಿ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗತರಾಗಿದ್ದರು. ಈ ವೇಳೆ ನಕ್ಸಲರಿಗೆ ಮೂಲಭೂತ ಸೌಕರ್ಯ ಒದಗಿಸುವುದಾಗಿ ಹಾಗೂ ಅವರ ಹಲವು ಬೇಡಿಕೆ ಈಡೇರಿಕೆಗೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದರು. ಆ ಬೆನ್ನಲ್ಲೇ ನಕ್ಸಲರು ಸಿಎಂ ಸಮ್ಮುಖದಲ್ಲಿ ಶರಣಾದರು.
ಇದೀಗ ಕಳಸ ತಾಲೂಕಿನ ಹಾದಿಓಣಿ ಗ್ರಾಮದ ಬುಡಕಟ್ಟು ಜನಾಂಗದವರು ಮೂಲಭೂತ ಸೌಲಭ್ಯಗಳಿಗಾಗಿ ನಕ್ಸಲರನ್ನ ನೆನೆದಿದ್ದಾರೆ. ನಾವು ನಕ್ಸಲ್ ಆಗಬೇಕಿತ್ತು, ಆಗ ಸೌಲಭ್ಯ ಸಿಗ್ತಿಕ್ತು. ಅಂತಹ ಸಂಘಟನೆಯಲ್ಲಿ ನಾವು ಇರಬೇಕಿತ್ತು, ಈಗ ಅವ್ರು ಶರಣಾಗಿದ್ದಾರೆ. ನಾವು ಅವರ ಜೊತೆ ಅದೇ ದಾರಿ ತುಳಿದಿದ್ರೆ ನಮಗೆ ಹೊಳೆ ದಾಟಿ ಬದ್ಕೋ ಸ್ಥಿತಿ ಬರ್ತಿರ್ಲಿಲ್ಲ ಎಂದು ರಸ್ತೆ ಸೇರಿ ಮೂಲಭೂತ ಸೌಲಭ್ಯಕ್ಕಾಗಿ ಹೆಂಗಸರು-ಗಂಡಸರು ಕಣ್ಣೀರು ಹಾಕಿದ್ದಾರೆ.
ಈ ಬುಡಕಟ್ಟು ಜನಾಂಗ ಸುಮಾರು 40 ವರ್ಷಗಳಿಂದ ತೆಪ್ಪದಲ್ಲಿ ಭದ್ರಾ ನದಿ ದಾಟಿ ಬದುಕ್ತಿದ್ದು, ತೆಪ್ಪ ಇಲ್ಲದಿದ್ದರೆ ಇವರಿಗೆ ಬದುಕೇ ಇಲ್ಲ, ಒಂದು ತುತ್ತು ಅನ್ನ ತಿನ್ನೋದಕ್ಕೂ ತೆಪ್ಪ ಬೇಕು. ಗ್ರಾಮದಲ್ಲಿ ಯಾರಾದ್ರು ಸತ್ರು ಹೆಣವನ್ನೂ ತೆಪ್ಪದಲ್ಲೇ ಸಾಗಿಸ್ಬೇಕು. ಹೀಗಾಗಿ ರಸ್ತೆ ಮಾಡಿ ಕೊಡಿ, ಇಲ್ಲ ತೂಗುಸೇತುವೆ ಮಾಡಿ, ಇಲ್ಲ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಬುಡಕಟ್ಟು ಜನಾಂಗ ಕಣ್ಣೀರು ಹಾಕಿ ಮೂಲಸೌಕರ್ಯಕ್ಕೆ ಅಂಗಲಾಚಿದ್ದಾರೆ.