ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ ರಾಜ್ಯ ಪತ್ರಕರ್ತರ 39ನೇ ಸಮ್ಮೇಳನದಲ್ಲಿ ಕೆಯುಡಬ್ಲೂಜೆ ಕೊಡಮಾಡುವ ಪ್ರತಿಷ್ಠಿತ ಜಿ.ನಾರಾಯಣಸ್ವಾಮಿ(ಅತ್ಯುತ್ತಮ ಗ್ರಾಮಾಂತರ ವರದಿಗಾಗಿ) ಪ್ರಶಸ್ತಿಗೆ ಭಾನರಾಗಿ ಪ್ರಶಸ್ತಿ ಸ್ವೀಕರಿಸಿದ ಪಟ್ಟಣದ ಪತ್ರಕರ್ತ ದಿಗಂಬರ ಪೂಜಾರ ಅವರನ್ನು ಶ್ರೀ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಮಿತಿ ಸಂಸ್ಥಾಪಕರಾದ ಕರಿಯಪ್ಪ ಶಿರಹಟ್ಟಿ, ಕರ್ನಾಟಕ ದಲಿತ ಯುವ ಮುನ್ನಡೆ ರಾಜ್ಯಾಧ್ಯಕ್ಷ ಫಕೀರಪ್ಪ ಭಜಕ್ಕನವರ ಹಾಗೂ ಅವರ ಸಮಾನ ಮನಸ್ಕ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಪೂರ್ಣಾಜಿ ಖರಾಟೆ, ದಿಗಂಬರ ಪೂಜಾರರ ಬದ್ಧತೆ, ಪ್ರಾಮಾಣಿಕತೆ, ಸರಳತೆ ಅನುಕರಣೀಯ. ಅವರು ಎಲ್ಲರೊಂದಿಗೆ ಸ್ನೇಹಭಾವದಿಂದ ಇರುವ ವ್ಯಕ್ತಿಯಾಗಿದ್ದು, ಪತ್ರಿಕಾರಂಗದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವುದು ಹೆವ್ಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಸಿ.ಜಿ. ಹಿರೇಮಠ ಮಾತನಾಡಿ, ದಿಗಂಬರ ಪೂಜಾರರು ತಮ್ಮ ಜೀವನದಲ್ಲಿ ಎದುರಾದ ಹಲವು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಅನೇಕ ವರ್ಷಗಳಿಂದ ಜನರ ಸಂಕಷ್ಟಗಳಿಗೆ ಧನಾತ್ಮಕವಾಗಿ ಸ್ಪಂದಿಸುವ ಅಪರೂಪದ ವ್ಯಕ್ತಿತ್ವ ಹೊಂದಿದ್ದು, ಅವರಿಗೆ ಪ್ರಶಸ್ತಿ ದೊರಕಿರುವದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿಗಂಬರ ಪೂಜಾರ, ಉತ್ತಮ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಮುಖ್ಯವಾದದ್ದು ಎಂದರು. ನಿವೃತ್ತ ಶಿಕ್ಷಣ ಸಂಯೋಜಕರಾದ ಎನ್.ಆರ್. ಸಾತಪುತೆ, ಫಕ್ಕೀರೇಶ ಡಿ.ಬಿ., ಕರಿಯಪ್ಪ ಶಿರಹಟ್ಟಿ ಮಾತನಾಡಿದರು.
ಅತಿಥಿಗಳಾಗಿ ಎಮ್.ಎನ್. ಬಾಡಗಿ, ಎಸ್.ಬಿ. ಲಕ್ಮೇಶ್ವರ, ಫಕೀರಪ್ಪ ಶಿಗ್ಲಿ, ಮಂಜುನಾಥ್ ಹರಿಜನ, ಗುಡ್ಡಪ್ಪ ಮತ್ತೂರ, ರಾಜೇಶ್ ಕಮತದ, ಆನಂದ ತಳಗೇರಿ, ಡಿ.ಕೆ. ಅನೂಪ್ ಹಾಗೂ ವೇದಿಕೆ ಸದಸ್ಯರು ಹಾಜರಿದ್ದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು, ಬಸವರಾಜ ಯರಗುಪ್ಪಿ ನಿರೂಪಿಸಿದರು.