ವಿಜಯಸಾಕ್ಷಿ ಸುದ್ದಿ, ಗದಗ: ನಾವು ಶೈಕ್ಷಣಿಕವಾಗಿ ಪ್ರಗತಿಯಾದರೆ ಜೀವನದಲ್ಲಿ ಒಳ್ಳೆಯ ಬದುಕನ್ನು ಸಾಗಿಸಿ ಸಮಾಜದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದಪ್ಪ ಎನ್.ಲಿಂಗದಾಳ ಹೇಳಿದರು.
ಬೆಟಗೇರಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ, ಗುರಮ್ಮಾ ಕಾಲೇಜ್ ಆಫ್ ನರ್ಸಿಂಗ್ ಗದಗ ಶಿಕ್ಷಣ ವಿದ್ಯಾಲಯದ 2023-24ನೇ ಸಾಲಿನ ಅಂತಿಮ ಬಿಎಸ್ಸಿ ನರ್ಸಿಂಗ್ ರ್ಯಾಂಕ್ ಪಡೆದ ಶ್ವೇತಾ ಬಾಗೇವಾಡಿಯವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ವೇತಾ ಬಾಗೇವಾಡಿ, ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಗುರಿ ಸಾಧಿಸಲು ನನಗೆ ಸಿದ್ದಪ್ಪ ಲಿಂಗದಾಳ ಮತ್ತು ಶ್ವೇತಾ ಪಾಟೀಲರು ಬೆಂಬಲವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ಘಟಕದ ರಾಜ್ಯ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಕಲಕಂಬಿ, ವಸತಿ ನಿಲಯದ ಮೇಲ್ವಿಚಾರಕಿ ಸುಜಾತಾ ಪಾಟೀಲ, ಗೌತಮ ಬುದ್ಧ ಸೇವಾ ಸಮಿತಿಯ ಹೆಚ್.ಎನ್. ಚಿಗರ, ಗೀತಾ ಕುಂಕದ, ಸಂತೋಷ ಕುಮಾರ ಕಾಲ್ಯಾಣ್ ಮುಂತಾದವರು ಉಪಸ್ಥಿತರಿದ್ದರು.