ವಿಜಯಸಾಕ್ಷಿ ಸುದ್ದಿ, ರೋಣ: ಧರ್ಮದ ಆಧಾರದಲ್ಲಿ ರೈತರನ್ನು ಒಡೆಯುತ್ತಿರುವ ರಾಜಕೀಯ ವ್ಯವಸ್ಥೆಯನ್ನು ನಾಡಿನ ರೈತರು ಖಂಡಿಸುವ ಮೂಲಕ ರೈತರಲ್ಲಿ ಏಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ರಾಜಕೀಯ ವ್ಯವಸ್ಥೆಗೆ ತಿಳಿಸಬೇಕಾದ ಅಗತ್ಯತೆಯಿದೆ ಎಂಬುದನ್ನು ರೈತರು ಅರಿಯಬೇಕು ಎಂದು ಸಿಐಟಿಯು ಮುಖಂಡ ಮಹೇಶ ಹಿರೇಮಠ ಹೇಳಿದರು.
ಅವರು ಸೋಮವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ಜರುಗಿದ ನರಗುಂದ, ನವಲಗುಂದ ರೈತ ಬಂಡಾಯದಲ್ಲಿ ಮಡಿದ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಹಾಗೂ ದೇವನಹಳ್ಳಿ ರೈತ ಹೋರಾಟದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳಿದ್ದು, ಅವುಗಳ ಸಿದ್ಧಾಂತ ಒಂದೇ ಆಗಿದೆ. ಎಲ್ಲ ಸಂಘಟನೆಗಳು ಸಹ ರೈತರ ಹಿತವನ್ನು ಬಯಸಿ ಹೋರಾಟ ಮಾಡುತ್ತವೆ. ಇದನ್ನು ಸಹಿಸದ ಬಂಡವಾಳಶಾಹಿಗಳು ಮತ್ತು ಪಟ್ಟಭದ್ರ ರಾಜಕೀಯ ವ್ಯವಸ್ಥೆ ರೈತರಲ್ಲಿ ಧರ್ಮ ಮತ್ತು ರಾಜಕೀಯ ವಿಷ ಬೀಜಗಳನ್ನು ಬಿತ್ತಿ ತಮ್ಮ ಲಾಭವನ್ನು ಹುಡುಕುತ್ತಿದೆ ಎಂದರು.
ಬAಡವಾಳಶಾಹಿಗಳು ತಯಾರಿಸುವ ಎಲ್ಲ ಉತ್ಪನ್ನಗಳಿಗೆ ದರ ನಿಗದಿಪಡಿಸುವ ಸರಕಾರಗಳು ರೈತ ಬೆಳೆದ ಬೆಳೆಗಳಿಗೆ ಮಾತ್ರ ದರ ನಿಗದಿ ಮಾಡುತ್ತಿಲ್ಲ. ಕಾರಣ ಅವರಿಗೆ ರೈತರ ಏಳ್ಗೆ ಬೇಕಾಗಿಲ್ಲ. ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ತರಲು ಹೊರಟ್ಟಿತ್ತು. ಇದನ್ನರಿತ ರೈತ ಹೋರಾಟಗಾರರು ಸತತ ಹೋರಾಟ ನಡೆಸಿ ರೈತ ವಿರೋಧಿ ಕಾಯ್ದೆಗಳು ಜಾರಿಗೆ ಬರದಂತೆ ನೋಡಿಕೊಂಡರು ಎಂದರು.
ಈ ಸಂದರ್ಭದಲ್ಲಿ ಮುತ್ತಣ್ಣ ಚೌಡರೆಡ್ಡಿ, ಕೂಡ್ಲೆಪ್ಪ ಗುಡಿಮನಿ, ಮೇಘರಾಜ ಭಾವಿ, ಲೋಕನಗೌಡ ಗೌಡ್ರ, ಮಾದೇಗೌಡ ಪಾಟೀಲ, ಕಸ್ತೂರಬಾಯಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.