ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನಗರೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಶ್ರಮ ವಹಿಸಿದ ಕಾರಣ ದೇವಸ್ಥಾನವು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ ಎಂದು ಪಟ್ಟಣದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ನವಲಿ ಹೇಳಿದರು.
ಅವರು ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಶ್ರಮ ವಹಿಸಿದ ಎಲ್ಲ ಮೇಸ್ತçಗಳನ್ನು, ಕಾರ್ಮಿಕರನ್ನು ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ವರ್ಷದ ಹಿಂದೆ ಆರಂಭವಾದ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಪಟ್ಟಣದ ಎಲ್ಲ ಸಮಾಜದ ಗುರುಹಿರಿಯರು, ಯುವಕರು ಸಹಕಾರ ನೀಡಿದ್ದಾರೆ. ಎಲ್ಲರೂ ತಮಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವವಹಿಸಿದ್ದಾರೆ. ಬೇರೆ ಊರುಗಳಿಂದ ಬಂದ ಭಕ್ತರು ದೇವಸ್ಥಾನದ ನಿರ್ಮಾಣದ ಕುರಿತು, ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ಶಾಂತತೆ ಬಗ್ಗೆ ಹೊಗಳುತ್ತಿದ್ದಾರೆ. ಇದರ ಕೀರ್ತಿ ಶ್ರಮಿಕ ವರ್ಗದ ಎಲ್ಲಾ ಕಾರ್ಮಿಕರಿಗೆ, ಮೇಸ್ತಿçಗಳಿಗೆ ಸೇರಬೇಕು ಎಂದರು.
ಕಾರ್ಮಿಕರಾದ ಗುಡದಪ್ಪ ಗೋಡಿ, ಪೀರಸಾಬ್ ರಾಹುತ್, ಶೇಖಪ್ಪ ಮಣ್ಣೊಡ್ಡರ, ರವಿ ನವಲಗುಂದ, ಕಳಕಪ್ಪ ಹುಯಿಲಗೋಳ, ವೀರಣ್ಣ ಗುಜಮಾಗಡಿ ಸೇರಿದಂತೆ ಎಲ್ಲಾ ಶ್ರಮಿಕ ವರ್ಗದ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಕಾರ್ಯದರ್ಶಿ ಚಂದ್ರಹಾಸ ಇಲ್ಲೂರ, ನಾಗೇಶ ಗುಡಿಸಾಗರ, ಸುರೇಶ ನವಲಿ, ವಿಜಯಕೃಷ್ಣ ನವಲಿ, ಚಂದ್ರಹಾಸ ಇಂಗಳಹಳ್ಳಿ, ಅಶೋಕ ನವಲಿ, ಮಹಾದೇವಪ್ಪ ಇಲ್ಲೂರ, ರಾಜೇಂದ್ರ ದೇವರಂಗಡಿ, ಮಹೇಶ ನವಲಿ, ರಾಮಚಂದ್ರ ಬೆಟದೂರ, ಚಂದ್ರಾವತಿ ಚಿನ್ನಿ, ಬಸವರಾಜ ಹೇಮಾದ್ರಿ, ಶ್ರೀನಿವಾಸ ಜಂತ್ಲಿ, ವೆಂಕಟೇಶ ಕಣವಿಹಳ್ಳಿ, ಹನಮಂತಪ್ಪ ಬಿಜಾಪುರ ಇದ್ದರು.
ಪ್ರಾಧ್ಯಾಪಕ ವಿ.ಸಿ. ಇಲ್ಲೂರ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಸಮಾಜದ ವತಿಯಿಂದ ನಿರ್ಣಯ ಕೈಗೊಂಡಾಗ ಅಶೋಕ ಶಂಕರರಾವ್ ಕುಲಕರ್ಣಿ ಜಾಗವನ್ನು ದಾನವಾಗಿ ನೀಡಿದರು. ಎಲ್ಲರ ಸಹಕಾರದಲ್ಲಿ ಮೂರು ಗರ್ಭಗೂಡಿ ನಿರ್ಮಿಸಿ ಅದರಲ್ಲಿ ಶ್ರೀ ಕನ್ಯಕಾ ಪರಮೇಶ್ವರಿ, ಶ್ರೀ ನಗರೇಶ್ವರ, ಶ್ರೀ ವೆಂಕಟೇಶ್ವರ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲಿನ ಗರ್ಭಗುಡಿಗಳ ಪಕ್ಕದಲ್ಲಿ ಶ್ರೀ ವಿಘ್ನೇಶ್ವರ, ಶ್ರೀ ಆಂಜನೇಯಸ್ವಾಮಿ ಮತ್ತು ಎದುರಿನಲ್ಲಿ ಶ್ರೀ ನಂದಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದರು.