ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣಾಭಿವೃದ್ಧಿ-ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ವಿಷ್ಣುಕಾಂತ ಚಟಪಲ್ಲಿಯವರು ಅಮೋಘವಾದ ಕಾರ್ಯವನ್ನು ನಿರ್ವಹಿಸಿರುವುದು ಅಭಿನಂದನಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅಭಿಪ್ರಾಯಪಟ್ಟರು.
ಸೇವಾ ನಿವೃತ್ತಿ ಹೊಂದಿದ ನಿಮಿತ್ತ ವಿಷ್ಣುಕಾಂತ ಚಟಪಲ್ಲಿಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಗದಗ ನಗರದಲ್ಲಿ ನೂತನವಾಗಿ ಪ್ರಾರಂಭವಾದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಚಟಪಲ್ಲಿಯವರು 4 ವರ್ಷಗಳವರೆಗೆ ಕುಲಪತಿಗಳಾಗಿ ವಿಶ್ವವಿದ್ಯಾಲಯದ ಸರ್ವತೋಮುಖ ಅಬಿವೃದ್ಧಿಯನ್ನು ಸಾಧಿಸುವಲ್ಲಿ ಶ್ರಮಿಸುವ ಮೂಲಕ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆಯುವಂತೆ ಮಾಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಷ್ಣುಕಾಂತ ಚಟಪಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರ ಇಚ್ಛಾಶಕ್ತಿಯ ಪರಿಣಾಮವಾಗಿ ವಿಶ್ವವಿದ್ಯಾಲಯ ಬೆಳವಣಿಗೆಯಾಗಿದೆ. ಅಲ್ಲದೇ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು ವಿಧಾನ ಪರಿಷತ್ನಲ್ಲಿ ಪಕ್ಷಾತೀತವಾಗಿ ತಮ್ಮ ಪ್ರಶ್ನೆಗಳ ಮೂಲಕ ಸರ್ಕಾರದ ಗಮನ ಸೆಳೆದು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಭಾಜನರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಷ್ಣುಕಾಂತ ಚಟಪಲ್ಲಿಯವರ ಧರ್ಮಪತ್ನಿ ವಂದಿತಾ ಚಟಪಲ್ಲಿ, ವಿಶ್ವವಿದ್ಯಾಲಯದ ರಜಿಸ್ಟಾçರ್ ಎಸ್.ವಿ. ನಾಡಗೌಡರ, ಪ್ರೊ. ಎಸ್.ಐ. ಮೇಟಿ, ಪ್ರೊ. ಕಿಶೋರಬಾಬು ಜೆ. ನಾಗರಕಟ್ಟಿ, ಡಾ. ಎಮ್.ಡಿ. ಸಾಮುದ್ರಿ, ಡಾ. ಬೂದೇಶ ಕಣಾಜ ಉಪಸ್ಥಿತರಿದ್ದು ಶುಭ ಹಾರೈಸಿದರು.