ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸೋಮವಾರ ಮೃತರಾದ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರಿಗೆ ಸಿಪಿಐಎಂ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಅಚ್ಯುತಾನಂದನ್ ಸಾರ್ವಜನಿಕ ಜೀವನದಲ್ಲಿ ನ್ಯಾಯ ಮತ್ತು ಜನ ಸಾಮಾನ್ಯರ ಪರವಾಗಿ ದೃಢವಾದ ಧ್ವನಿಯಾಗಿದ್ದರು. ಕೇರಳದ ಮುಖ್ಯಮಂತ್ರಿಯಾಗಿಯೂ ಸೇರಿದಂತೆ ಅಧಿಕಾರದ ಸ್ಥಾನಗಳಲ್ಲಿ ಅವರು ತಮ್ಮ ತತ್ವಗಳಿಗೆ ನಿಷ್ಠರಾಗಿದ್ದರು. ಅವರ ನಿಧನದಿಂದ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ತಮ್ಮ 17ನೇ ವಯಸ್ಸಿಗೆ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿಕೊಂಡವರು. ಭಾರತದ ಬಹುದೊಡ್ಡ ರೈತ ಕಾರ್ಮಿಕರ ಹೋರಾಟಗಳಲ್ಲೊಂದಾದ ಪುನ್ನಪ್ರ ವಯಲಾರ್ ಸಂಘರ್ಷದಲ್ಲಿ ಪೊಲೀಸರ ವಿಚಿತ್ರ ಹಿಂಸೆಗಳಿಗೆ ಒಳಗಾದವರು. ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ನಿರ್ಮೂಲನೆಯ ಕ್ರಮಗಳಿಗೆ ಹೆಸರಾದವರು ಎಂದರು.
ಸಿಪಿಐಎಂ ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಜಿಲ್ಲಾ ಸಮಿತಿ ಸದಸ್ಯರಾದ ಮೆಹಬೂಬ್ ಹವಾಲ್ದಾರ್, ಪೀರು ರಾಠೋಡ, ಚಂದ್ರು ರಾಠೋಡ, ಚೆನ್ನಪ್ಪ ಗುಗಲೋತ್ತರ, ಕನಕರಾಯ ಹಾದಿಮನಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.