ಗದಗ: ಮಹಾ ಶಿವರಾತ್ರಿ ಹಬ್ಬದ ಮಹತ್ವದ ಸಂದರ್ಭದಲ್ಲಿ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನ ಭಕ್ತರ ಮಹಾಪ್ರವಾಹವನ್ನು ಸ್ವಾಗತಿಸಲು ಸಂಪೂರ್ಣ ಸಜ್ಜಾಗಿದೆ. ನಗರವೇ ಹಬ್ಬದ ವಾತಾವರಣಕ್ಕೆ ತೇಲಿಬಿದ್ದಿದ್ದು, ದೇವಾಲಯ ಆವರಣದಲ್ಲಿ ಸಕಲ ಸಿದ್ಧತೆಗಳು ಚುರುಕುಗೊಂಡಿವೆ.
ಭಕ್ತರ ಸುಗಮ ದರ್ಶನಕ್ಕಾಗಿ ವಿಶಾಲ ಪೆಂಡಾಲ್ ನಿರ್ಮಾಣ, ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ಬ್ಯಾರಿಕೇಡ್ ವ್ಯವಸ್ಥೆ, ನೆಲಮಟ್ಟದಲ್ಲಿ ಮ್ಯಾಟ್ ಹಾಸುವ ಕಾರ್ಯ, ಆಕರ್ಷಕ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಗಳು ವೇಗವಾಗಿ ಪೂರ್ಣಗೊಳ್ಳುತ್ತಿವೆ. ದೇವಸ್ಥಾನ ಆವರಣ ಶಿವಭಕ್ತರ ಘೋಷಗಳಿಂದ ಮೆರೆಯುವ ನಿರೀಕ್ಷೆ ಇದೆ.
ನಾಳೆ ಬೆಳಿಗ್ಗೆ 4 ಗಂಟೆಯಿಂದಲೇ ಮಹಾರುದ್ರಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ಅನೇಕ ವೈಭವಮಯ ಪೂಜಾ ವಿಧಿಗಳು ನೆರವೇರಲಿವೆ. ಒಂದೇ ಪಾಣಿ ಬಟ್ಟಲಿನಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತತ್ವಗಳನ್ನು ಒಳಗೊಂಡಿರುವ ಉದ್ಭವ ಲಿಂಗವೇ ಈ ಕ್ಷೇತ್ರದ ಮಹತ್ವ. ಇದೇ ವೈಶಿಷ್ಟ್ಯದಿಂದ “ತ್ರಿಕೂಟೇಶ್ವರ” ಎಂಬ ಹೆಸರಿನಿಂದ ಈ ಧಾಮ ಪ್ರಸಿದ್ಧಿ ಪಡೆದಿದೆ.
ಗದಗ ಮಾತ್ರವಲ್ಲದೆ ಧಾರವಾಡ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ರಾಜ್ಯದ ನಾನಾಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯಲಿದ್ದಾರೆ.
ಶಿವರಾತ್ರಿ ಪ್ರಯುಕ್ತ ರಾತ್ರಿ ಇಡೀ ಪುರಾಣ, ಪ್ರವಚನ ಹಾಗೂ ಭಕ್ತಿಭಾವದ ಜಾಗರಣೆ ನಡೆಯಲಿದ್ದು, ಶಿವನಾಮ ಸ್ಮರಣೆಯೊಂದಿಗೆ ಧಾರ್ಮಿಕ ಉತ್ಸವ ರಂಗೇರಲಿದೆ.



