ಸ್ವರಕ್ಷಣೆಗಾಗಿ ಮಹಿಳೆಯರಿಗೆ ತ್ರಿಶೂಲ ದೀಕ್ಷೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಮಹಿಳೆಯರಿಗೆ ಸರಕಾರದಿಂದ ಅಥವಾ ಪೊಲೀಸರಿಂದ ರಕ್ಷಣೆಯಿಲ್ಲ. ಅವರು ತಮ್ಮ ಸ್ವಯಂ ರಕ್ಷಣೆಗೆ ತ್ರಿಶೂಲ ಇಟ್ಟುಕೊಂಡಿರಬೇಕು. ಈ ತ್ರಿಶೂಲವನ್ನು ಮಹಿಳೆಯರು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಓಡಾಡಬೇಕು. ಸಮಸ್ಯೆ ಮಾಡುವವರಿಂದ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡುತ್ತಿದ್ದೇವೆ ಎಂದು ಹೇಳಿರುವದಾಗಿ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ತ್ರಿಶೂಲ ದೀಕ್ಷೆ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Advertisement

ಅವರು ಲಕ್ಷೇಶ್ವರ ಶ್ರೀರಾಮ ಸೇನಾ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಶಿವಯೋಗಿ ಗಾಂಜಿ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅತ್ಯಾಚಾರಿಗಳು ಮತ್ತು ಮಹಿಳೆಯರಿಗೆ ಹಾನಿ ಮಾಡಲು ಅಥವಾ ಶೋಷಿಸಲು ಪ್ರಯತ್ನಿಸುವವರ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಮಹಿಳೆಯರು ಧೈರ್ಯವನ್ನು ಬೆಳೆಸಿಕೊಳ್ಳಬೇಕು. ತ್ರಿಶೂಲ ದೀಕ್ಷೆಯು ಧೈರ್ಯ, ಶೌರ್ಯ ಮತ್ತು ಜೀವನದಲ್ಲಿ ಪ್ರತಿಕೂಲಗಳ ವಿರುದ್ಧ ಹೋರಾಡುವ ಮನೋಭಾವವನ್ನು ತುಂಬುತ್ತದೆ ಎಂದು ಹೇಳಿದರು.

1995ರ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವುದನ್ನು ಸ್ವಾಗತಿಸುವದಾಗಿ ಹೇಳಿದ ಮುತಾಲಿಕ, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. 50 ವರ್ಷಗಳಿಂದ ವಕ್ಫ್ ಮಂಡಳಿಯು ಸರ್ಕಾರಿ ಭೂಮಿ ಮತ್ತು ದೇವಾಲಯಗಳು, ಮಠಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ಲಕ್ಷಾಂತರ ಎಕರೆ ಭೂಮಿಗಳನ್ನು, ಆಸ್ತಿಗಳನ್ನು ಲೂಟಿ ಮಾಡುತ್ತಿದೆ. ಇದು ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲದಿಂದ ನಡೆಯುತ್ತಿದ್ದು, ಕಾಂಗ್ರೆಸ್‌ನವರಿಗೆ ಹಿಂದೂಗಳ ಮೇಲೆ ಎಂದಿಗೂ ಪ್ರೀತಿ ಬರಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ನಿಜವಾದ ರಾಷ್ಟ್ರದ್ರೋಹಿಗಳಾಗಿದ್ದಾರೆ ಎಂದರು.

ಯತ್ನಾಳ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ, ಆ ವಿಚಾರ ಅವರ ಪಕ್ಷದ ಆಂತರಿಕ ಸಮಸ್ಯೆ. ಕೇಂದ್ರ ವರಿಷ್ಠರು ಮಾಡಿರುವ ನಿರ್ಧಾರವಾಗಿದೆ. ಆದರೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವದು ನಮ್ಮ ಹೇಳಿಕೆಯಾಗಿದೆ. ಇಲ್ಲದಿದ್ದಲ್ಲಿ ಪಕ್ಷದ ಮೇಲೆ ಸಮಸ್ಯೆಯಾಗಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದ್ದು, ಹಿಂದೂ ಕಾರ್ಯಕರ್ತರಿಗೆ, ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂಗಳ ವಿರುದ್ಧ ಹೋರಾಡುವವರು ಗೂಂಡಾಗಳೇ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಇಲಾಖೆ ಸರಕಾರದ ನಿರ್ದೇಶನದಂತೆ ನಡೆಯುತ್ತದೆ. ಇದರಿಂದ ಪೊಲೀಸರಿಂದಲೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಭ್ರಷ್ಟ ಸರಕಾರ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರಲ್ಲದೆ, ಗುತ್ತಿಗೆದಾರರು, ಉಪನ್ಯಾಸಕರು ಸಂಬಳವಿಲ್ಲದೆ ಒದ್ದಾಡುತ್ತಿದ್ದಾರೆ. ಆದರೆ ಇದು ಸರಕಾರಕ್ಕೆ ಲೆಕ್ಕಕ್ಕಿಲ್ಲವೇ ಎಂದು ಪ್ರಶ್ನಿಸಿದರು.

ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ರಾಜೂ ಖಾನಪ್ಪನವರ ಇದ್ದರು.

ರಾಜ್ಯದಲ್ಲಿ, ದೇಶದಲ್ಲಿ, ಬಡವರು ಊಟಕ್ಕಿಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ಸಂಸದರು, ಶಾಸಕರು ತಮ್ಮ ಸಂಬಳವನ್ನು ಡಬಲ್ ಮಾಡಿಕೊಂಡಿದ್ದಾರೆ. ಇದಕ್ಕೆ ಯಾವುದೇ ಪಕ್ಷಗಳು ವಿರೋಧಿಸಲಿಲ್ಲ. ರಾಷ್ಟ್ರಪತಿಗಳು, ರಾಜ್ಯಪಾಲರು ಸಹ ಅಂಕಿತ ಹಾಕಿದರು. ಇದಕ್ಕೆ ಶ್ರೀರಾಮ ಸೇನೆಯಿಂದ ಧಿಕ್ಕಾರ ಹೇಳುತ್ತೇನೆ. ದೇಶದಲ್ಲಿರುವ ಯಾವ ಸಂಸದರು, ಶಾಸಕರು ಊಟಕ್ಕೆ ಗತಿಯಿಲ್ಲದಿರುವಷ್ಟು ಬಡವರಿದ್ದಾರೆ ಎಂದು ಪ್ರಶ್ನಿಸಿದ ಮುತಾಲಿಕ, ಈ ಸಂಬಳ ಹೆಚ್ಚಳಕ್ಕೆ ಪಕ್ಷಾತೀತ ಬೆಂಬಲ ನೀಡುತ್ತಿರುವದು ಎಲ್ಲ ಪಕ್ಷಗಳ ನಿರ್ಲಜ್ಜೆಯ ನಡೆಯಾಗಿದೆ ಎಂದು ಟೀಕಿಸಿದರು.


Spread the love

LEAVE A REPLY

Please enter your comment!
Please enter your name here