ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹದ ಅಸ್ತ್ರದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಬಣ್ಣಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ 121ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ತಮ್ಮ ದೇಶದಲ್ಲಿಯೇ ಇರುವ ಸಾಮಾಜಿಕ ಸಮಸ್ಯೆಗಳಾದ ಅಸ್ಪೃಶ್ಯತೆ ಹಾಗೂ ಪರಕೀಯರ ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಿದರು. ಸತ್ಯ ಮತ್ತು ಸರಳತೆ ಇವರ ವಿಶೇಷತೆಗಳಾಗಿದ್ದವು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅವರು ದೇಶಗಳಲ್ಲಿನ ಬಹಳಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನೂ ಸಹ ಮಾತುಕತೆಯಿಂದ ಬಗೆಹರಿಸಬಹುದಾಗಿದೆ ಎಂದು ಸಮಾಜಕ್ಕೆ ತಿಳಿಸಿದ ಮಹಾತ್ಮರು ಎಂದರು.
ರಾಜ್ಯದಲ್ಲಿ ಜರುಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಗದಗ ತಾಲೂಕಿನ ಶಿಕ್ಷಕರಾದ ಮಲ್ಲಮ್ಮ ಹೂಗಾರ, ಕಾಶಿಬಾಯಿ ಮದಿ, ಎಚ್.ಡಿ. ಕುರಿ, ಪ್ರದೀಪ ಚಿತ್ತರಗಿ, ಜಯಕುಮಾರ್, ರಂಗಪ್ಪನವರ, ಹುಸೇನಬಾದಶಾಹ ಮಂಗಳೂರ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಸೌಮ್ಯ ದೇವೇಂದ್ರಪ್ಪ ಮೆಣಸಿನಕಾಯಿ–ಪ್ರಥಮ, ಸಮೀಕ್ಷಾ ಮೇಗಳಮನಿ–ದ್ವಿತೀಯ, ಸೌಮ್ಯ ಜಗ್ಗಲ–ತೃತೀಯ, ಪದವಿಪೂರ್ವ ವಿಭಾಗದಲ್ಲಿ ಐಶ್ವರ್ಯ ಎಂ.ತಮ್ಮಣ್ಣವರ–ಪ್ರಥಮ, ಸಾಹಿಲ್–ದ್ವಿತೀಯ, ಅಕ್ಷತಾ ಮಲ್ಲಪ್ಪ ಹೂಗಾರ–ತೃತೀಯ, ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಹನಾ ಹೆಬಸೂರ–ಪ್ರಥಮ, ಕೃಷ್ಣಾ ದೂರಪ್ಪನವರ–ದ್ವಿತೀಯ, ಕೀರ್ತಿ ಮಾನ್ವಿ–ತೃತೀಯ, ಸುಮಿತ್ರಾ ಗವಾರಿ ಚತುರ್ಥ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ, ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಎಂ.ಜಿ.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಬಾರಂಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ್ರ ಕೋಟೂರ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.
ಕಲಾವಿದ ಡಾ. ವೆಂಕಟೇಶ ಅಲ್ಕೋಡ ಮಹಾತ್ಮ ಗಾಂಧೀಜಿಯವರ ಪ್ರಿಯ ಭಜನೆಗಳನ್ನು ಪ್ರಸ್ತುತಪಡಿಸಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರೊ. ಬಾಹುಬಲಿ ಜೈನರ್ ನಿರ್ವಹಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬರಗಾಲವಿದ್ದ ಕಾರಣ, ದೇಶದ ಜನತೆ ಆಹಾರದ ಕೊರತೆ ಅನುಭವಿಸುತ್ತಿರುವುದರಿಂದ ವಾರದಲ್ಲಿ ಒಂದು ದಿನ ದೇಶದ ಜನರೆಲ್ಲರೂ ಉಪವಾಸ ಮಾಡಬೇಕು ಎಂದರಲ್ಲದೆ, ಸ್ವತಃ ಶಾಸ್ತ್ರೀಜಿ ಅವರು ಕೂಡ ಉಪವಾಸ ಕೈಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಂಡರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.