ಅಮರಾವತಿ:– ತಿರುಪತಿ ತಿಮ್ಮಪ್ಪನ ಚಿನ್ನ ಕದ್ದಿದ್ದ ಟಿಟಿಡಿ ನೌಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನವನ್ನು ಕದ್ದಿದ್ದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಟಿಟಿಡಿ ನೌಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶ್ರೀವರಿ ಪರಕಾಮಣಿಯ ಸಂಗ್ರಹಾಲಯದಿಂದ ಚಿನ್ನವನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಕಳೆದ ಎರಡು ವರ್ಷಗಳಿಂದ ಕಾಣಿಕೆ ಹುಂಡಿ ಹಣ ಎಣಿಸುವ ಮತ್ತು ವಿಂಗಡಿಸುವ ಕೆಲಸದಲ್ಲಿ ತೊಡಗಿದ್ದ ವೀರಿಶೆಟ್ಟಿ ಪೆಂಚಲಯ್ಯ ಎಂಬ ವ್ಯಕ್ತಿ, ಪರಕಾಮಣಿಯ ಚಿನ್ನದ ಸಂಗ್ರಹಣಾ ಕೊಠಡಿಯಲ್ಲಿ ಸಂಗ್ರಹಿಸಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದ.
ಜನವರಿ 11ರ ಶನಿವಾರ ಮಧ್ಯಾಹ್ನ, ಪೆಂಚಲಯ್ಯ ಶೇಖರಣಾ ಕೊಠಡಿಯಿಂದ 100 ಗ್ರಾಂ ಚಿನ್ನದ ಬಿಸ್ಕೆಟ್ಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದಾನೆ. ಕದ್ದ ಚಿನ್ನದ ಬಿಸ್ಕೆಟ್ಗಳನ್ನು ಪರಕಮಣಿ ಕಟ್ಟಡದಲ್ಲಿ ಟ್ರಾಲಿಯ ಮೂಲಕ ಸಾಗಿಸುತ್ತಿದ್ದಾಗ ವಿಜಿಲೆನ್ಸ್ ಸಿಬ್ಬಂದಿ ಅಡಗಿಸಿಟ್ಟ ಚಿನ್ನವನ್ನು ಪತ್ತೆ ಮಾಡಿ, ಸಿಸಿಟಿವಿ ಮೂಲಕ ಕಳ್ಳತನವನ್ನು ದೃಢಪಡಿಸಿ, ತಿರುಮಲ ಪೊಲೀಸರಿಗೆ ಒಪ್ಪಿಸಿದ್ದಾರೆ.