ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಸವಣೂರು ತಾಲೂಕ ಹೂವಿನ ಶಿಗ್ಲಿ ಗ್ರಾಮದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳವರ ನಾಣ್ಯಗಳಿಂದ ತುಲಾಭಾರ ಕಾರ್ಯಕ್ರಮವನ್ನು ಸಮಿತಿಯವರು ಹಾಗೂ ಭಕ್ತರು ನೆರವೇರಿಸಿದರು.
ನೇತೃತ್ವ ವಹಿಸಿದ್ದ ಜಲ್ಲಾಪೂರದ ಡಾ.ಗುರು ಮಹಾಂತಯ್ಯ ಶಾಸ್ತ್ರೀಗಳು ಮಾತನಾಡಿ, ಭಾರತ ದೇಶ ಸಂಪ್ರದಾಯಬದ್ಧವಾದ ದೇಶವಾಗಿದ್ದು, ಮಠಮಾನ್ಯಗಳಿಗೆ ಗೌರವ ನೀಡುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ಯುವಕರು ಧರ್ಮ ಮಾರ್ಗದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.
ಹೂವಿನಶಿಗ್ಲಿಯ ಇನ್ನೊಬ್ಬ ಪ್ರವಚನಕಾರ ಗದಗ ಬೂದಿಹಾಳದ ಗವಿಸಿದ್ದೇಶ್ವರ ಶಾಸ್ತ್ರೀಗಳು ಮಾತನಾಡಿ, ಹೆಣ್ಣು-ಹೊನ್ನು-ಮಣ್ಣುಗಳಿಗೆ ಬೆಲೆ ಕೊಡದೆ ಗುರುಗಳಿಗೆ ಗೌರವ ಕೊಡಬೇಕು. ಗುರು ಮುಖೇನ ಮಾಡಿದ ಕಾರ್ಯಗಳು ಸಫಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾನಗಲ್ಲ ಗುರು ಕುಮಾರೇಶ್ವರ 157ನೇ ಜನ್ಮದಿನೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅವರ ಕಾರ್ಯ ಸಾಧನೆಯನ್ನು ಸ್ಮರಿಸಲಾಯಿತು. ತುಲಾಭಾರದ ತಕ್ಕಡಿಯಲ್ಲಿ ಕುಳಿತು ಆಶೀರ್ವಚನ ನೀಡಿದ ಚನ್ನವೀರ ಶ್ರೀಗಳು, ಹಿಂದೂ ಮಹಾಸಭಾ ಗಣಪತಿಯ ಯುವಕರು ನಮ್ಮ ಗುರುಕುಲ ಶಿಕ್ಷಣ ಸಂಸ್ಥೆಯ ಅನಾಥ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ತುಲಾಭಾರ ನಡೆಸಿದ್ದು ನಮಗೆ ತುಂಬಾ ತುಂಬಾ ಸಂತೋಷ ನೀಡಿದೆ. ಅಧ್ಯಾತ್ಮದ ಹಾದಿ ತುಳಿದರೆ ಜೀವನ ಪಾವನ ಎಂದು ನುಡಿದರು.
ಸಿದ್ದಯ್ಯ ಹಿರೇಮಠ್ ಹಾಗೂ ಬಾಲಾಜಿ ಕಟ್ಟಿ ಸಂಗಾವಿ ಅವರಿಂದ ಸಂಗೀತ ಸೇವೆ ನಡೆಯಿತು. ಮಹಾದೇವ ಬಿಸ್ಟ್ಟಣ್ಣವರ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿ ವಂದಿಸಿದರು.