ತುಮಕೂರು:- ತುಮಕೂರು ಸಮೀಪದ ಬೆಳಗುಂಬದ ವಾಕ್ ಶ್ರವಣ ದೋಷ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಕಳೆದ ಸೋಮವಾರ ಕಾಣಿಸಿಕೊಂಡಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ವಾಕ್ ಶ್ರವಣ ದೋಷ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಕಳೆದ ಸೋಮವಾರ ಚಿರತೆ ಕಾಣಿಸಿಕೊಂಡಿತ್ತು. ಬೆಟ್ಟಕ್ಕೆ ಹೊಂದಿಕೊಂಡಂತೆ ಇರುವ ವಸತಿ ಶಾಲೆ ಬಳಿ ಚಿರತೆ ಇದ್ದದ್ದನ್ನು ಮಕ್ಕಳು ಹಾಗೂ ಸಿಬ್ಬಂದಿಗಳು ನೋಡಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಮೇರೆಗೆ ಸ್ಥಳಕ್ಕೆ ಎಸಿಎಫ್ ಪವಿತ್ರಾ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು. ಶಾಲೆಯಿಂದ 200 ಮೀಟರ್ ದೂರದಲ್ಲಿ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದರು. ಅದರಂತೆ ನಿನ್ನೆ ರಾತ್ರಿ ಬೋನ್ ನಲ್ಲಿ ಚಿರತೆ ಸೆರೆಯಾಗಿದೆ. ಚಿರತೆ ಸೆರೆಯಿಂದ ಶಾಲಾ ಮಕ್ಕಳು ಹಾಗೂ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.