ಮಂಗಳೂರು:– ಸೆಮಿನಾರ್ ತಪ್ಪಿಸಲು ವಿದ್ಯಾರ್ಥಿನಿಯಿಂದಲೇ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಮಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಎಸ್ ಇತ್ತೀಚೆಗೆ ಇಲ್ಲಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜು & ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಕಾಲೇಜಿನ ವಿದ್ಯಾರ್ಥಿನಿಯೇ ಹುಸಿ ಬಾಂಬ್ ಬೆದರಿಕೆ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಜೂನ್ 4ರಂದು ಉಳ್ಳಾಲದ ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿಗಳಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಂಪೂರ್ಣ ಆಸ್ಪತ್ರೆ ಹಾಗೂ ಕಾಲೇಜನ್ನು ಪರಿಶೀಲನೆ ಮಾಡಿತ್ತು. ಈ ವೇಳೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಖಾತ್ರಿಯಾಯಿತು.
ಆಸ್ಪತ್ರೆಯ ಪ್ರಸವ ಕೊಠಡಿಯ ಫೋನಿಗೆ ದೂರವಾಣಿ ಕರೆ ಬಂದಿತ್ತು. ಬೆಳಗ್ಗೆ 11 ಗಂಟೆಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ 5 ಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ಪಿಜಿ ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಎಂಬಾಕೆ ದೂರು ನೀಡಿದ್ದಳು. ಆರೋಪಿ ಪತ್ತೆಗಾಗಿ ವಿಶೇಷ ತಂಡಗಳನ್ನ ರಚಿಸಿ ಪೊಲೀಸರು ತನಿಖೆಗಿಳಿದಿದ್ದರು. ಈ ವೇಳೆ ದೂರುದಾರೆಯಿಂದಲೇ ಹುಸಿ ಬಾಂಬ್ ಬೆದರಿಕೆ ಎಂಬ ವಿಚಾರ ಬೆಳಕಿಗೆ ಬಂದಿದೆ. ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾಳೆ ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ.