ತುಮಕೂರು: ಮೊದಲ ಪತ್ನಿಯ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಮತ್ತೊಂದು ಮದುವೆಗೆ ಮುಂದಾಗಿದ್ದ ವರನಿಗೆ ಮದುವೆ ಮಂಟಪದಲ್ಲೇ ಭಾರೀ ಶಾಕ್ ಎದುರಾಗಿದೆ. ಮಂಟಪದಲ್ಲಿ ನಡೆದ ಹೈಡ್ರಾಮಾ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ತುಮಕೂರಿನ ಎಡೆಯೂರು ದೇವಸ್ಥಾನದ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಮದುವೆ ಮಂಟಪದಲ್ಲಿ ಇನ್ನೇನು ಮದುಮಗ ಹರಿಪ್ರಸಾದ್ ವಧುವಿಗೆ ತಾಳಿ ಕಟ್ಟಬೇಕಿದ್ದ ಕ್ಷಣದಲ್ಲೇ, ಆತನ ಮೊದಲ ಪತ್ನಿ ಲೇಪಾಕ್ಷಿ ಮಂಟಪಕ್ಕೆ ಎಂಟ್ರಿ ನೀಡಿ ರಂಪಾಟ ನಡೆಸಿ ಮದುವೆಯನ್ನು ನಿಲ್ಲಿಸಿದ್ದಳು.
ಈ ಘಟನೆಯ ಬಳಿಕ ಥಂಡ ಹೊಡೆದಿದ್ದ ಹರಿಪ್ರಸಾದ್ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಎರಡನೇ ಮದುವೆಗೆ ಹಸೆಮಣೆ ಏರಿದ್ದ ಮಂಡ್ಯ ಮೂಲದ ಯುವತಿ ಕೂಡ ಹರಿಪ್ರಸಾದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲ ಮದುವೆ ವಿಚಾರವನ್ನು ಮರೆಮಾಚಿ, ಮದುವೆಗೆಂದು ಲಕ್ಷ ಲಕ್ಷ ಹಣ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ವಂಚನೆ ಪ್ರಕರಣವನ್ನು ಯುವತಿಯ ಸ್ವಂತ ಜಿಲ್ಲೆ ಮಂಡ್ಯದಲ್ಲಿ ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.



