ಬೆಂಗಳೂರು: ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಅದು ಸಿದ್ದರಾಮಯ್ಯನವರು ಅಂತ ಭಾವಿಸಿದ್ದೆವು. ಕರ್ನಾಟಕ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು ಒಬ್ಬರು ದೆಹಲಿಯಲ್ಲಿ ಇದ್ದಾರೆ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯನವರು ಅವರ ಆದೇಶವನ್ನು ಪಾಲಿಸಲಿಕ್ಕೆ ಕರ್ನಾಟಕದಲ್ಲಿ ಸಿಎಂ ಸ್ಥಾನದಲ್ಲಿದ್ದಾರೆ ಎಂಬುದು ಈ ಮೂರು ದಿನದೊಳಗೆ ನಮಗೆ ಗೊತ್ತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇರಳ ಸರಕಾರದ ಆದೇಶಗಳು ಜಾರಿ ಆಗುತ್ತಿವೆ ಎಂದು ಸುದ್ದಿಯಾಗುತ್ತಿದೆ ಎಂಬುದಾಗಿ ಆಕ್ಷೇಪಿಸಿದರು. ನಾನು ಬಡವರ ಬಗ್ಗೆ ವಿರೋಧ ಅಲ್ಲ. ಯಾರು ನಿಜವಾಗಿಯೂ ನಮ್ಮ ನಾಡಿನವರು ಬಡವರಿದ್ದಾರೋ ಅಂತವರಿಗೆ ಸೂರು ಕಟ್ಟಿಕೊಡಲಿಕ್ಕೆ ನಮ್ಮ್ದ ವಿರೋಧ ಇಲ್ಲ. ಆದರೆ ಸಿದ್ದರಾಮಯ್ಯನವರ ಸರ್ಕಾರ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಹಿಂದುಳಿದವರ ಹೆಸರು ಮೇಲೆ ಅಧಿಕಾರಕ್ಕೆ ಬಂದಂತ ಒಬ್ಬ ಅಹಿಂದ ನಾಯಕ ಸ್ವಂತ ವಿವೇಚನೆಯಿಂದ ಅಧಿಕಾರ ನಡೆಸುತ್ತಿಲ್ಲವೆಂದರೆ, ಅವರು ಯಾವ ಸೀಮೆ ಮುಖ್ಯಮಂತ್ರಿಗಳು ಎಂದು ಕೇಳಿದರು.
ದೆಹಲಿಯಲ್ಲಿ ಕೂತವರು ಟಮ್ರ್ಸ್ ಡಿಕ್ಟೇಟ್ ಮಾಡುತ್ತಾರೆ. ಅವರು ಹೇಳಿದಂತೆ ಅವರ ಅಣತಿಯಂತೆ ನಡೆಯುತ್ತದೆ. ಬೆಂಗಳೂರಿನವರು, ನಮ್ಮವರೇ ಕಲ್ಯಾಣ ನಗರ ಕಮ್ಮನಹಳ್ಳಿ ಒಳಗೆ ಎಸ್ಸಿ ಜನಾಂಗದವರು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಅನೇಕ ವರ್ಷಗಳಿಂದ ಇದ್ದರು. ಅವರನ್ನು ಬುಲ್ಡೋಜರ್ ಬಳಸಿ ಸಿದ್ದರಾಮಯ್ಯನವರ ಸರ್ಕಾರ ಖಾಲಿ ಮಾಡಿಸಿತು. ಅವರ ಬಗ್ಗೆ ಯಾರೂ ಸಹಾನುಭೂತಿ ವ್ಯಕ್ತ ಮಾಡಲಿಲ್ಲ. ಅವರಿಗೊಂದು ಮನೆ ಕೊಡುವುದಾಗಿ ಹೇಳಲಿಲ್ಲ. ಆದರೆ ಇವತ್ತು ಕೋಗಿಲು ಕ್ರಾಸ್ನಲ್ಲಿ ಇರುವವರಲ್ಲಿ ಹೊರಗಿನವರು ಎಷ್ಟು, ಹೊರಗಿನ ದೇಶದವರು ಎಷ್ಟು ಎಂಬ ಬಗ್ಗೆ ನಗರದಲ್ಲಿ ಬಹಳ ದೊಡ್ಡ ಸುದ್ದಿಯಾಗಿ ಚರ್ಚೆ ನಡೆದಿದೆ ಎಂದು ತಿಳಿಸಿದರು.



