ಧಾರವಾಡ:- ಜಿಲ್ಲೆಯ ಗಾಮನಗಟ್ಟಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದ ಇಬ್ಬರು ಬಾಲಕರು ದಾರುಣವಾಗಿ ಸಾವನಪ್ಪಿದ ಘಟನೆ ಜರುಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮದ ಹೊರವಲಯದ ಕೆರೆಯ ಬಳಿಯ ಇರುವ ಕೃಷಿ ಹೊಂಡದಲ್ಲಿ ಈಜಲು ತೆರಳಲು ಹೋಗಿ ಈ ದುರ್ಘಟನೆ ನಡೆದಿದೆ. 10 ವರ್ಷದ ಜೀವನ್ ಮೇದಾರ, 12 ವರ್ಷದ ಪ್ರವೀಣ್ ಲೋಕುರ ಮೃತ ದುರ್ದೈವಿಗಳು. ಆಟ ಆಡಲು ಹೋಗುವುದಾಗಿ ಕುಟುಂಬಸ್ಥರಿಗೆ ತಿಳಿಸಿ ಹೋಗಿದ್ದರಂತೆ. ಮೂವರ ಬಾಲಕರು ಕೂಡಿಕೊಂಡು ಕೃಷಿ ಹೊಂಡಕ್ಕೆ ಈಜಲು ಹೋಗಿದ್ದಾರೆ. ಈ ವೇಳೆ ಮೃತರಿಬ್ಬರು ಹೊಂಡದಲ್ಲಿ ಇಳಿದಿದ್ದು, ಇಬ್ಬರು ನೀರಿನಲ್ಲಿ ಕಾಣದ ಹಿನ್ನಲೆಯಲ್ಲಿ ಇವರ ಜೊತೆ ಹೋಗಿದ್ದ ಇನ್ನೊಬ್ಬ ಬಾಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಇಬ್ಬರು ಬಾಲಕರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟೋತ್ತಿಗಾಗ್ಲೆ ಬಾಲಕರಿಬ್ಬರು ಪ್ರಾಣ ಪಕ್ಷಿ ಹಾರಿಹೋಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಕಿಮ್ಸ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ನವನಗರ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.