ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತಗಳಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಿರಿಯರು ಮಾತ್ರವಲ್ಲದೆ, ಯುವ ಜನರು ಕೂಡ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಯು ಆತಂಕ ಮೂಡಿಸುತ್ತಿದೆ. ಇಂದು ಮತ್ತೆ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಬ್ಬರು ರೈತರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹಿರೇಶಕುನ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಕೃಷ್ಣಮೂರ್ತಿ ಶಿಗ್ಗಾದ್ (62) ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಅಚಾನಕ್ ಕುಸಿದು ಬಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಇದೇ ರೀತಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ಮೆಣಸಮಕ್ಕಿ ಗ್ರಾಮದಲ್ಲಿ ಲಕ್ಷ್ಮಣ (52) ಎಂಬ ರೈತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ದುಡಿದು ಮನೆಗೆ ಹಿಂದಿರುಗಿದ್ದ ಅವರು, ಅಚಾನಕ್ ಎದೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ತಕ್ಷಣವೇ ಅಂಬುಲೆನ್ಸ್ಗೆ ಕರೆ ನೀಡಿದ್ರು ಕೂಡ ವಾಹನ ಮನೆಗೆ ತಲುಪುವ ಮುನ್ನವೇ ಅವರು ಸಾವನ್ನಪ್ಪಿದರು.