ಬೆಂಗಳೂರು:- ನಗರದ ಕೆ.ಆರ್ ಸರ್ಕಲ್ ಬಳಿ ಕಸದ ಲಾರಿಗೆ ಬೈಕ್ ಸಿಲುಕಿ, ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಪ್ರಶಾಂತ್ ಹಾಗೂ ಬಯ್ಯಣ್ಣ ಗರಿ ಶಿಲ್ಪ ಮೃತ ದುರ್ದೈವಿಗಳು. ಸಿಐಡಿ ಸಿಗ್ನಲ್ ಕಡೆಯಿಂದ ಕೆ.ಆರ್ ಸರ್ಕಲ್ ಕಡೆಗೆ ವೇಗವಾಗಿ ತಿರುವು ಪಡೆಯುತ್ತಿದ್ದ ಲಾರಿಗೆ, ಮೆಜೆಸ್ಟಿಕ್ ಕಡೆಯಿಂದ ಬಂದ ಬೈಕ್ ಸಿಲುಕಿದೆ. ಈ ವೇಳೆ 10 ಮೀಟರ್ನಷ್ಟು ದೂರ ದೇಹಗಳನ್ನ ಲಾರಿ ಎಳೆದೊಯ್ದಿದಿದೆ. ಕೂಡಲೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿಯಲು ಯತ್ನಿಸಲಾಯ್ತಾದ್ರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಮೃತ ಪ್ರಶಾಂತ್ ಹಾಗೂ ಶಿಲ್ಪ ಇಬ್ಬರು ಒಂದೇ ಕಂಪನೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಶಾಂತ್ ಮೂಲತಃ ಬೆಂಗಳೂರಿನ ಯುವಕ ಆಗಿದ್ದು, ಇಬ್ಬರು ಕೂಡ ಸ್ನೇಹಿತರು. ಇಬ್ಬರ ಮೃತದೇಹವನ್ನ ಸೆಂಟ್ ಮಾರ್ಥಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಇನ್ನು, ಶಿಲ್ಪ ಆಂಧ್ರ ಪ್ರದೇಶ ಹಿಂದೂಪರ ಮೂಲದವರಾಗಿದ್ದು, ಐಟಿಪಿಎಲ್ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಾ ನಾಗವಾರದ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ಊಟಕ್ಕೆ ಎಂದು ಹೊರಗೆ ಬಂದಾಗ ದುರ್ಘಟನೆ ನಡೆದಿದ್ದು, ಘಟನೆ ಬಳಿಕ ಕಸದ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ
ಮೃತ ಶಿಲ್ಪ ತಂದೆ ವೆಂಕಟರಾಮ ರೆಡ್ಡಿ ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ, ವೆಂಕಟರಾಮ ರೆಡ್ಡಿಗೆ ಒಟ್ಟು ಮೂವರು ಹೆಣ್ಣು ಮಕ್ಕಳಿದ್ದು, ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ಕೊನೆಯ ಮಗಳಾಗಿದ್ದ ಶಿಲ್ಪಗೆ ಮದುವೆ ಮಾಡಲು ತಂದೆ ಚಿನ್ನವನ್ನು ಸಿದ್ಧಪಡಿಸಿದ್ದರಂತೆ. ಅಲ್ಲದೇ ಭಾನುವಾರ ಬೆಳಗ್ಗೆ ಕೂಡ ಮದುವೆ ಮಾತುಕತೆ ಪ್ರಸ್ತಾಪ ಆಗಿತ್ತು ಎನ್ನಲಾಗಿದ್ದು, ಸಂಜೆ ವೇಳೆ ಯುವತಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ